ರಾಮ ಸೇತುಗೆ ಹಾನಿಯಾದರೆ ಪರಿಣಾಮ ನೆಟ್ಟಗಿರಲ್ಲ
ಸೇತುಸಮುದ್ರ ಯೋಜನೆಯಲ್ಲಿ ಮುಂದುವರಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಯುಪಿಎ ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ ನೀಡಿದೆ ಹಾಗೂ ರಾಮ ಸೇತು ಕೋಟ್ಯಂತರ ಹಿಂದೂಗಳ ಭಾವನೆಗಳು ಈ ವಿಷಯದಲ್ಲಿ ಸಮ್ಮಿಳಿತವಾಗಿವೆ. ರಾಮ ಸೇತುವನ್ನು ಯಾವುದೇ ರೀತಿಯಲ್ಲಿ ಭಗ್ನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
'ರಾಮ ಸೇತುವೆ ಧ್ವಂಸಗೊಳಿಸಿ ಸೇತು ಸಮುದ್ರಂ ಯೋಜನೆ ಜಾರಿಗೆ ತರುವುದು ಆರ್ಥಿಕವಾಗಿ ಹಾಗೂ ಪರಿಸರ ದೃಷ್ಟಿಯಿಂದ ಕಾರ್ಯಸಾಧುವಲ್ಲ' ಎಂದು ಆರ್.ಕೆ. ಪಚೌರಿ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದು, ಸೇತು ಸಮುದ್ರಂ ಯೋಜನೆಗೆ ಈಗಾಗಲೇ 800 ಕೋಟಿ ರೂ. ವೆಚ್ಚ ಮಾಡಿರುವುದರಿಂದ ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿದೆ.
ರಾಮ ಸೇತು ವಿಷಯದಲ್ಲಿ ಸರಕರಕ್ಕೆ ನಾವು ಎಚ್ಚರಿಕೆ ನೀಡಲು ಬಯಸುತ್ತೇವೆ. ಆರ್.ಕೆ. ಪಚೌರಿ ಸಮಿತಿಯ ವರದಿಯನ್ನು ಸರಕಾರ ನಿರ್ಲಕ್ಷಿಸುತ್ತಿದೆ ಮತ್ತು ಯೋಜನೆಯಲ್ಲಿ ಮುಂದುವರಿಯುತ್ತಿದೆ. ಇದು ಹಿಂದೂ ಭಾವನೆಗಳು ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದರು. ಯೋಜನೆಯನ್ನು ಕೈ ಬಿಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ.
ಸೇತುಸಮುದ್ರ ನೌಕಾಯಾನ ಕಡಲ್ಗಾಲುವೆ ಯೋಜನೆ ಆರ್ಥಿಕ ಮತ್ತು ಭೌಗೋಳಿಕ ಕಾರಣಗಳಿಗಾಗಿ ಕಾರ್ಯಸಾಧ್ಯವಲ್ಲ ಎಂದು ಪಚೌರಿ ಸಮಿತಿ ಹೇಳಿತ್ತು. ಅದು ತನ್ನ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸರ್ಕಾರ ವರದಿಯನ್ನು ತಿರಸ್ಕರಿಸಿತ್ತು ಮತ್ತು ಯೋಜನೆಯಲ್ಲಿ ಮುಂದುವರಿಯುವ ಉದ್ದೇಶವಿದೆ ಎಂದು ತಿಳಿಸಿತ್ತು. ಆಡಂನ ಸೇತುವೆ ಎಂದು ಇದಕ್ಕೆ ಹೆಸರಿಟ್ಟಿದ್ದರೂ, ರಾಮ ಸೇತುವೆಂದೇ ಇದು ಜನಪ್ರಿಯವಾಗಿದೆ. ರಾಮ ಸೇತುವನ್ನು ಭಗ್ನಗೈದು ಕಡಲ್ಗಾಲುವೆ ನಿರ್ಮಿಸಲು ಸರಕಾರ ಉದ್ದೇಶಿಸಿದೆ.
ರಾಮ ಸೇತುವನ್ನು ಯಾವುದೇ ರೀತಿಯಲ್ಲಿ ಭಗ್ನಗೊಳಿಸುವುದನ್ನು ಬಿಜೆಪಿ ಮತ್ತು ದೇಶ ಸಹಿಸದು. ಸೇತುವನ್ನು ಭಗ್ನಗೊಳಿಸುವುದೇ ಏಕೈಕ ಪರಿಹಾರವೇ ಎಂದು ಪ್ರಸಾದ್ ಕೇಳಿದರು. ಯೋಜನೆಯಲ್ಲಿ ಈಗಾಗಲೇ 800 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ ಎಂಬ ಸರಕಾರದ ಪ್ರತಿಪಾದನೆಯನ್ನು ಅವರು ತಿರಸ್ಕರಿಸಿದರು. ಎಷ್ಟು ಮೊತ್ತ ವ್ಯಯಿಸಲಾಯಿತು ಎನ್ನುವುದು ಪ್ರಶ್ನೆಯಲ್ಲ. ವೆಚ್ಚದ ಆವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ರಾಮ ಸೇತು ವಿನಾ ನೀವು ರಾಮಾಯಣವನ್ನು ಕಲ್ಪಿಸಲಾರಿರಿ. ಕೋಟ್ಯಂತರ ಹಿಂದೂಗಳ ಭಾವನೆ, ನಂಬಿಕೆ ಈ ವಿಷಯದಲ್ಲಿ ಅಡಕಗೊಂಡಿದೆ ಎಂದು ಪ್ರಸಾದ್ ತಿಳಿಸಿದರು.ಸುಮಾರು 167 ಕಿ.ಮೀ ದೂರದ 12 ಮೀಟರ್ ಆಳದ 30 ಮೀ ವಿಸ್ತೀರ್ಣದ ಈ ಸೇತುಸಮುದ್ರ ನೌಕಾಯಾನ ಕಡಲ್ಗಾಲುವೆ ಯೋಜನೆ ಪಾಕ್ ಜಲಸಂಧಿ ದಾಟಿ ಭಾರತ ಹಾಗೂ ಶ್ರೀಲಂಕಾಕ್ಕೆ ಸಂರ್ಪಕ ಕಲ್ಪಿಸಲಿದೆ. (ಪಿಟಿಐ)