ಜಯನಗರದಲ್ಲಿ ಹಿಟ್ ಅಂಡ್ ರನ್, ಮಹಿಳೆ ಶರಣು
ಭಾನುವಾರದ ವರದಿ : ನಗರದ ಪಶ್ಚಿಮ ವಿಭಾಗದ ಟ್ರಾಫಿಕ್ ಪೊಲೀಸರು 28 ವರ್ಷ ವಯಸ್ಸಿನ ಮಹಿಳೆಗಾಗಿ ತೀವ್ರ ಶೋಧ ನಡೆಸಿದ್ದಾರೆ. ಕಳೆದ ರಾತ್ರಿ ಹಿಟ್ ಅಂಡ್ ರನ್ ಕೇಸಿನಲ್ಲಿ ಬುಕ್ ಆಗಿರುವ ಈ ಮಹಿಳೆ ಈಗ ಎಲ್ಲೂ ಸಿಗುತ್ತಿಲ್ಲ.
ಜಯನಗರದ 6ನೇ ಬ್ಲಾಕಿನ ಬಳಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದರು. ಆದರೆ, ಅವರ ಅದೃಷ್ಟ ಚೆನ್ನಾಗಿರಲಿಲ್ಲ. ಫುಟ್ ಪಾತ್ ಮೇಲೆ ನಡೆಯುತ್ತಿದ್ದವರ ಮೇಲೆ ಕಾರು ಹರಿದಿದೆ. ರಾಜೇಶ್ವರಿ ಎಂಬ ಮಹಿಳೆ ಅಡ್ಡಾ ದಿಡ್ಡಿ ಕಾರು ಓಡಿಸಿದ ಪರಿಣಾಮ ಒಬ್ಬ ಸ್ಥಳದಲ್ಳೇ ಮೃತಪಟ್ಟಿದ್ದಾನೆ. ನಾಲ್ವರಿಗೆ ಗಾಯಗಳಾಗಿದೆ.
ಈ ಘಟನೆಗೆ ಕಾರಣರಾದ ರಾಜೇಶ್ವರಿ ಅವರಿಗೂ ತೀವ್ರ ಗಾಯಗಳಾಗಿದೆ. ಅದರೆ, ಸ್ಥಳದಲ್ಲಿ ಒಂದು ಕ್ಷಣ ನಿಲ್ಲದೆ ಎಸ್ಕೇಪ್ ಆಗಿದ್ದಾರೆ. ಪ್ರತ್ಯಕ್ಷದರ್ಶಿ ಗಾಯಾಳುಗಳ ಪ್ರಕಾರ ಕಾರಿನ ವೇಗ ತುಂಬಾ ಇತ್ತು. ಕಾರಿನಲ್ಲಿ ಆಕೆ ಗಂಡ ಹಾಗೂ ಮಗುವೊಂದಿತ್ತು. ನಾವು ಬದುಕುಳಿದಿದ್ದೇ ಹೆಚ್ಚು ಎಂದಿದ್ದಾರೆ. ಘಟನೆ ನಂತರ ರಾಜೇಶ್ವರಿ ಅವರು ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ತೀವ್ರ ಹುಡುಕಾಟ ಜಾರಿಯಲ್ಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಮಹದೇವಯ್ಯ ಹೇಳಿದ್ದಾರೆ.
ನಾವು ಎಲ್ಲಾ ಆಸ್ಪತ್ರೆಗಳಲ್ಲಿ ಆಕೆ ಬಗ್ಗೆ ವಿಚಾರಿಸಿದ್ದೇವೆ. ಎಲ್ಲೆಡೆ ನಾಕಾಬಂದಿ ಹಾಕಲಾಗಿದೆ. ಇನ್ನೂ ಸಿಕ್ಕಿಲ್ಲ. ಫುಟ್ ಪಾತ್ ಮೇಲೆ ನಿಲ್ಲಿಸಿದ್ದ ಸುಮಾರು ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ಪಾದಚಾರಿಗಳ ಮೇಲೆ ಕಾರು ಹರಿದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣ: ಬನಶಂಕರಿ ಮೂರನೇ ಹಂತದ ರಿಂಗ್ ರಸ್ತೆಯಲ್ಲಿರುವ ಪಿಇಎಸ್ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. 22 ವರ್ಷ ವಯಸ್ಸಿನ ಎಲೆಕ್ಟ್ರಾನಿಕ್ಸ್ ನಲ್ಲಿ 6ನೇ ಸೆಮಿಸ್ಟರ್ ಓದುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮುಗ್ದಾ ಮೃತಪಟ್ಟ ದುರ್ದೈವಿ.
ಕಾಲೇಜ್ ಫೆಸ್ಟ್ ಮುಗಿಸಿಕೊಂಡು ಗಿರಿನಗರದಲ್ಲಿರುವ ವಸತಿ ನಿಲಯಕ್ಕೆ ಬರುತ್ತಿದ್ದಾಗ ಇನ್ನೋವಾ ಕಾರು ಬಡಿದು ತೀವ್ರ ಗಾಯಗಳಾಗಿತ್ತು. ಹತ್ತಿರದ ಆಸ್ಪತ್ರೆಗೆ ಸೇರಿ ಸೂಕ್ತ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ, ಘಟನೆಯಿಂದ ತೀವ್ರ ನೊಂದ ವಿದ್ಯಾರ್ಥಿ ಸಮೂಹ ಮನರಂಜನೆ ಕಾರ್ಯಕ್ರಮಗಳನ್ನು ಬಂದ್ ಮಾಡಿ ಶೋಕಾಚರಣೆಯಲ್ಲಿ ತೊಡಗಿದ್ದಾರೆ. ಬನಶಂಕರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರಿನ ಬಗ್ಗೆ ಹುಡುಕಾಟ ನಡೆಸಿದ್ದಾರೆ ಎಂದು ಡಿಸಿಪಿ ಮಹದೇವಯ್ಯ ಹೇಳಿದ್ದಾರೆ.