ಸ್ವಿ ಸ್ ವಾಚಿನಲ್ಲಿ ತಿಮ್ಮಪ್ಪ, ಏನಪ್ಪ ಇದು ಕಿರಿಕ್ಕು
ಸ್ವಿಸ್ ಕಂಪನಿ ಸೆಂಚುರಿ ತನ್ನ ಕೈ ಗಡಿಯಾರಗಳಲ್ಲಿ ತಿರುಪತಿ ತಿಮ್ಮಪ್ಪನ ಫೋಟೋ ಹಾಕಿ ಜನರನ್ನು ಸೆಳೆಯಲು ಯತ್ನಿಸಿತ್ತು. ಸುಮಾರು 15ಕ್ಕೂ ಹೆಚ್ಚು ಜನ ಕುತೂಹಲಿಗಳು ಈ ಲಿಮಿಟೆಡ್ ಎಡಿಷನ್ ವಾಚ್ ನಮಗೆ ಸಿಗಲಿ ಎಂದು ನೋಂದಣಿ ಕೂಡಾ ಮಾಡಿಸಿದ್ದರು.
ಆದರೆ, ತಿರುಪತಿ ತಿಮ್ಮಪ್ಪ ಎಂಬ ಬ್ರ್ಯಾಂಡ್ ನೇಮ್ ಇಟ್ಟುಕೊಂಡು ದುಡ್ಡು ಮಾಡಲು ಹೊರಟ ಸ್ವಿಸ್ ಕಂಪನಿ ಹಾಗೂ ಟಿಟಿಡಿ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 60ಕ್ಕೂ ಅಧಿಕ ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು ಸ್ವಿಸ್ ವಾಚ್ ಅನಾವರಣ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಾರೆ.
ವಾಚಿನಲ್ಲಿ ದೇವರ ಫೋಟೋ ಬಂದರೆ ಏನು ತಪ್ಪು ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದರೆ, ಜಗತ್ತಿಗೆ ತಂದೆಯಂತಿರುವ ತಿಮ್ಮಪ್ಪನ ಚಿತ್ರವಿರುವ ಗಡಿಯಾರವನ್ನು ಎಡಗೈಗೆ ಕಟ್ಟಿಕೊಳ್ಳುವುದು ಅಪಚಾರವಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನಂ ಸ್ವಿಸ್ ಕಂಪನಿ ಜೊತೆ ಒಳ ಒಪ್ಪಂದ ಮಾಡಿಕೊಂಡು ದೇವರ ಚಿತ್ರವನ್ನು ಮಾರಿಕೊಂಡಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಅಂದ ಹಾಗೆ, ಸ್ವಿಸ್ ಕಂಪನಿ ಹೊರ ತರಲಿರುವ ಈ ಚಿನ್ನ ಲೇಪಿತ ವಾಚಿನ ಬೆಲೆ ಕೇಳಿದರೆ ತಿಮ್ಮಪ್ಪ ಭಕ್ತರು ಹೌಹಾರಬೇಕಾಗುತ್ತದೆ.ಪ್ರತಿ ವಾಚಿನ ಬೆಲೆ 27 ಲಕ್ಷ ರು ಮಾತ್ರ. ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 333 ವಾಚುಗಳನ್ನು ಮಾರಲು ಸ್ವಿಸ್ ಕಂಪನಿ ನಿರ್ಧರಿಸಿದೆ. ಬೆಂಗಳೂರು ಮೂಲದ boutique Rodeo Drive ಸಂಸ್ಥೆ ಈ ವಾಚಿನ ಮಾರುಕಟ್ಟೆ ನಿರ್ವಹಣೆ ಹೊಣೆ ಹೊತ್ತಿದೆ.
ವಾಚಿನಿಂದ ಬರುವ ಹಣ ಅಥವಾ ಲಾಭದ ಶೇ 33 ರಷ್ಟು ಟಿಟಿಡಿ ನಡೆಯುವ ಪುನರ್ವಸತಿ ಕೇಂದ್ರ Balaji Institute of Surgery and Relief and Rehabilitation of the Disabled (BIRRD) Trust. ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಲ್ಲುತ್ತದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಹೊರ ಬಿದ್ದಿಲ್ಲ.
ಚಿನ್ನ, ವಜ್ರ ವೈಢೂರ್ಯ ಖಚಿತ ಶ್ರೀವಾರಿಯ ಚಿತ್ರ ಬಿಳಿ ಡಯಲ್ ಮೇಲೆ ನೋಡಲು ಎರಡು ಕಣ್ಣು ಸಾಲದು. ಸ್ವಿಸ್ ಕಂಪನಿ ಜೊತೆ ಸೇರಿ ತಿಮ್ಮಪ್ಪನ ಜನಪ್ರಿಯತೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಮ್ದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಎಲ್ ವಿ ಸುಬ್ರಮಣ್ಯಂ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದಲ್ಲಿ ಈ ರೀತಿ ತೊಂದರೆ ಇರುವುದಿಲ್ಲ. ಯಾವುದೇ ಜಾತಿ ಧರ್ಮ ಮತ ಪಂಥ ದ ದೇವರ ಚಿತ್ರವನ್ನು ವಾಣಿಜ್ಯ ಉದ್ದೇಶಿತ ಸಾಮಾಗ್ರಿಗಳ ಮೇಲೆ ಮುದ್ರಿಸಲು ಅಥವಾ ಚಿತ್ರಿಸಲು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಖಂಡಿತವಾಗಿಯೂ ಬಿಡುವುದಿಲ್ಲ. ದೇವರ ಚಿತ್ರ ದುರ್ಬಳಕೆ ಅದರೆ ನಾನು ಸುಮ್ಮನಿರುವುದಿಲ್ಲ ಎಂದು ಶಪಥ ಮಾಡಿದ್ದಾರೆ ನಮ್ಮ ಸಚಿವರು.