ಶನಿವಾರ ಹತ್ತಿರದ ಅಗ್ನಿಶಾಮಕ ದಳದ ಸ್ಟೇಷನ್ನಿಗೆ ಬನ್ನಿ
ಅದೇನೇ ಇರಲಿ, ಮೂರು ವರ್ಷಗಳ ಹಿಂದೆ ನಡೆದ ಆ ದುರ್ಘಟನೆ ಜನಮಾನಸದಿಂದ ಇನ್ನೂ ಮರೆಯಾಗಿಲ್ಲ. ಅಂದು 9 ಜನರು ಪ್ರಾಣ ಕಳೆದುಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾಣವನ್ನು ಒತ್ತೆಯಿಟ್ಟು ಅನೇಕ ಜನರನ್ನು ಪಾರು ಮಾಡಿದ್ದರು.
ಆ ಸಂದರ್ಭದಲ್ಲಿ ದಟ್ಟಹೊಗೆಯಿಂದ ಆವರಿಸಿಕೊಂಡಿದ್ದ ಕಟ್ಟಡದಲ್ಲಿ ಸಿಲುಕಿದ್ದ ಜನರನ್ನು ಪಾರುಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಅನುಭವಿಸಿದ ಸಂಕಷ್ಟ ಮತ್ತು ನಂತರ ಆತ್ಮೀಯರನ್ನು ಕಳೆದುಕೊಂಡ ಕುಟುಂಬದವರು ಅನುಭವಿಸಿದ ನೋವು ಅನುಭವಿಸಿದವರಿಗೇ ಗೊತ್ತು.
ಆ ದುರಂತದ ಮೂರನೇ ವರ್ಷಾಚರಣೆಯ ಸಂದರ್ಭದಲ್ಲಿ, ಸತ್ತವರ ಕುಟುಂಬದವರು ಸೇರಿ 'ಬಿಯಾಂಡ್ ಕಾರ್ಲ್ಟನ್' ಎಂಬ ಅಭಿಯಾನವನ್ನು ಆರಂಭಿಸಿದ್ದು, ಅಗ್ನಿಶಾಮಕ ದಳ ಯಾವ ರೀತಿ ಕೆಲಸ ನಿರ್ವಹಿಸುತ್ತದೆ, ಎಂಥ ಸವಾಲುಗಳನ್ನು ಎದುರಿಸುತ್ತದೆ, ಅಪಾಯ ಬಂದಾಗ ಸಾರ್ವಜನಿಕರು ಹೇಗೆ ವರ್ತಿಸಬೇಕು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬೆಂಗಳೂರಿನಲ್ಲಿರುವ 15 ಅಗ್ನಿಶಾಮಕ ದಳದ ಸ್ಟೇಷನ್ನಿಗೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಯಾರು ಬೇಕಾದರೂ ಬಂದು ಸಿಬ್ಬಂದಿಗಳು ಹೇಗೆ ಕೆಲಸ ನಿರ್ವಹಿಸುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ವಿಪ್ಪತ್ತು ನಿರ್ವಹಣೆಯ ಬಗ್ಗೆ ಕೂಡ ಸಾರ್ವಜನಿಕರು ಸಿಬ್ಬಂದಿಗಳಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಅಪಾರ್ಟ್ಮೆಂಟಲ್ಲಿ ವಾಸಿಸುವವರು, ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುವವರು, ಮಾಲ್ಗಳನ್ನು ಸಂದರ್ಶಿಸುವವರು ಈ ಅಭಿಯಾನದ ಪ್ರಯೋಜನ ಪಡೆದುಕೊಂಡು, ಸಮಾಜಕ್ಕೆ ಸಹಕಾರಿಯಾಗುವುದರ ಜೊತೆಗೆ ತಮ್ಮ ಜೀವವನ್ನು ತಾವೇ ಉಳಿಸಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಾರ್ವಜನಿಕರು 080- 22971500 ನಂಬರಿಗೆ ಕರೆ ಮಾಡಿ ಹತ್ತಿರದ ಅಗ್ನಿಶಾಮಕ ದಳದ ಸ್ಟೇಷನ್ನಿಗೆ ಭೇಟಿ ನೀಡಿ, ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಬಹುದು.