ಬೆಂಗಳೂರು ಐಟಿ ಕಂಪನಿಗಳಿಗೆ ಹೆಚ್ಚಿನ ಭದ್ರತೆ
ಐಟಿ ಕಂಪನಿಗಳು, ಧಾರ್ಮಿಕ ಕೇಂದ್ರಗಳು, ಪ್ರಮುಖ ವಿಹಾರ ತಾಣಗಳು, ಮಾಲ್ ಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು. 2 ದಿನಗಳ ಹಿಂದೆಯೇ ಗುಪ್ತಚರ ದಳದಿಂದ ಮಾಹಿತಿ ಬಂದಿದ್ದು, ಎಚ್ಚರದಿಂದ ಇರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದಲೇ ನಗರದಲ್ಲಿ ಅಗತ್ಯ ಭದ್ರತೆ ಒದಗಿಸಲಾಗಿದೆ. ರಾತ್ರಿ ಪೂರ್ತಿ ಪೊಲೀಸರು ಗಸ್ತಿನಲ್ಲಿದ್ದು, ಎಚ್ಚರ ವಹಿಸಿದ್ದಾರೆ ಎಂದರು.
ರಾತ್ರಿ ವೇಳೆ ಮೆಜೆಸ್ಟಿಕ್, ಏರ್ಪೋರ್ಟ್, ರೇಲ್ವೆ ನಿಲ್ದಾಣ ಸೇರಿದಂತೆ ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಲ್ಲಿ ಅಲ್ಲದೆ, ನಗರದಿಂದ ಹೊರ ಹೋಗುವ ಹಾಗೂ ನಗರಕ್ಕೆ ಒಳಬರುವ ಎಲ್ಲ ವಾಹನಗಳ ತಪಾಸಣೆ ಮತ್ತು ವಾಹನ ಪರವಾನಗಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ರಾತ್ರಿ ಗಸ್ತಿನಲ್ಲಿದ್ದಾರೆ.
ಇದೇ ರೀತಿಯ ಭದ್ರತೆ ನಗರದಲ್ಲಿ ಇನ್ನೂ 2 ದಿನಗಳ ಕಾಲ ಮುಂದುವರಿಯಲಿದೆ. ಪರಿಸ್ಥಿತಿ ನೋಡಿಕೊಂಡು ಅಗತ್ಯ ಬಿದ್ದಲ್ಲಿ ಭದ್ರತೆಯನ್ನು ಮುಂದುವರಿಸಲಾಗುವುದು. ಜನರು ಯಾವುದೇ ರೀತಿ ಆತಂಕ ಪಡಬೇಕಾಗಿಲ್ಲ. ಯಾವ ತೊಂದರೆಯಾಗದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ ಎಂದು ಭರವಸೆ ನೀಡಿದರು.
ಅನುಮಾಸ್ಪದ ವ್ಯಕ್ತಿಗಳ ಬಗ್ಗೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿಡಲಾಗುತ್ತದೆ. ಮಾಹಿತಿ ನೀಡಿದವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿದರು. ಅಲ್ಲದೆ ತಪಾಸಣೆ ವೇಳೆ ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಶೆಟ್ಟರ್ ಹೇಳಿಕೆ: ಹೈದರಾಬಾದಿನಲ್ಲಿ ಗುಪ್ತಚರ ಇಲಾಖೆ ಮುನ್ನಚರಿಕೆ ವಹಿಸಿದ್ದರೆ ಬಾಂಬ್ ಸ್ಪೋಟ ಘಟನೆಯನ್ನು ತಡೆಯಬಹುದಿತ್ತು. ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಆದರೂ ರಾಜ್ಯದಲ್ಲಿ ತೀವ್ರ ನಿಗಾವಹಿಸಲು ಸೂಚಿಸಲಾಗಿದೆ. ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು ಎಂದರು,