ವಲಸೆ ಹಕ್ಕಿಗಳ ಮೇಲೆ ಸಿದ್ದರಾಮಯ್ಯ ಗರಂ
ಬಿಜೆಪಿಯಿಂದ ಒಂದೊಂದೇ ವಿಕೆಟ್ ಉದುರಿ ಕಾಂಗ್ರೆಸ್ ಕಡೆಗೆ ಬೀಳುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಅದರಲ್ಲೂ ಪಕ್ಷ ಬಿಟ್ಟು ಪಕ್ಷಕ್ಕೆ ಹಾರಿದ ಪ್ರಮುಖರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿ ನಿಲ್ಲುವ ಸಂದರ್ಭದಲ್ಲಿ ಸಿದ್ದು ಈ ರೀತಿ ಹೇಳಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತದೆ.
ಕಾಂಗ್ರೆಸ್ ಸೇರ ಬಯಸಿರುವ ಸಿ.ಪಿ ಯೋಗೇಶ್ವರ್, ವಿ ಸೋಮಣ್ಣ ಸೇರ್ಪಡೆಗೆ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು ಎಂಬುದನ್ನು ಇಲ್ಲೇ ಸ್ಮರಿಸಲೇಬೇಕಿದೆ. ಆದರೂ, ದೆಹಲಿಯಲ್ಲಿ ಪರಮೇಶ್ವರ್ ಜೊತೆಗೂಡಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ವಲಸೆ ಹಕ್ಕಿಗಳ ಪಟ್ಟಿಯನ್ನು ಸಲ್ಲಿಸಿ ಬಂದಿದ್ದರು
ರಾಜ್ಯದಲ್ಲಿ ಈಗಾಗಲೇ ನಾಲ್ಕು ಮುಕ್ಕಾಲು ವರ್ಷ ಭ್ರಷ್ಟಾಚಾರ ತಾಂಡವವಾಡಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಅನೇಕ ಶಾಸಕರು, ಸಚಿವರು ಕಾಂಗ್ರೆಸ್ ನತ್ತ ಮುಖ ಮಾಡಿರುವುದರಲ್ಲಿ ಆಶ್ವರ್ಯವಿಲ್ಲ. ಪಕ್ಷದ ತೀರ್ಮಾನಕ್ಕೆ ಪ್ರತಿಯೊಬ್ಬರು ಬದ್ಧರಾಗಿರಬೇಕು. ಜನ ಬಲ ವಿಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣೆ ಬಗ್ಗೆ: ಸ್ಥಳೀಯ ಸಂಸ್ಥೆ ಚುನಾವಣೆ ಸೆಮಿಫೈನಲ್ ಇದ್ದಂತೆ, ವಿಧಾನಸಭೆ ಫೈನಲ್ ಚುನಾವಣೆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು. ಸೆಮಿಫೈನಲ್ ನಲ್ಲಿ ಗೆದ್ದರೆ, ಫೈನಲ್ ಸುಲಭವಾಗಲಿದೆ. ಈ ಚುನಾವಣೆಯನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ಪಕ್ಷದಿಂದ ಹಣ ಬಯಸುವುದು ತಪ್ಪು. ತಮಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸುವುದು ಅಥವಾ ಮತ್ತೊಂದು ಪಕ್ಷಕ್ಕೆ ಹೋಗುವ ಕೆಲಸ ಮಾಡಬಾರದು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.