ಸುಪ್ರೀಂ ನ್ಯಾಯತಕ್ಕಡಿ ಮುಂದೆ ಕರ್ನಾಟಕ ಬೆಪ್ಪುತಕ್ಕಡಿ
ಆದರೆ, ಕರ್ನಾಟಕದ ಜನತೆಗೆ ಆ ಉಲ್ಕೆಯ ಆಘಾತದಿಂದ ಸುಧಾರಿಸಿಕೊಳ್ಳುವುದು ದುಸ್ತರವಾಗಲಿದೆ. ಉಲ್ಕಾಪಾತಕ್ಕೆ ಗರ್ಭಪಾತವಾದರೂ ಆಗುತ್ತದಾ ಅಂದರೆ No chance, ಕಾವೇರಿ ನೀರು ಹಂಚಿಕೆ ಕುರಿತು ಐ ತೀರ್ಪಿನ ಅಧಿಸೂಚನೆ ಇಂದು ಯಾವುದೇ ಕ್ಷಣ ಅಧಿಕೃತವಾಗಿ ಹೊರಬೀಳಬಹುದಾಗಿದೆ. ಸುಪ್ರೀಂಕೋರ್ಟ್ ನ್ಯಾಯತಕ್ಕಡಿಯ ಮುಂದೆ ಕರ್ನಾಟಕ ಬೆಪ್ಪುತಕ್ಕಡಿಯಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ.
ಇಂದು ಅಧಿಸೂಚನೆ ಹೊರಬೀಳುತ್ತಿದ್ದಂತೆ ಶತಮಾನದಿಂದ 'ಕಾವೇರಿ ನಮ್ಮದು' ಎಂದು ಅದರ ಮೇಲೆ ನಿರರ್ಥಕ ಅಧಿಕಾರ ಹೊಂದಿದ್ದ ಕರ್ನಾಟಕ ಸರಕಾರ, ಆ ಅಪ್ರಯೋಜಕ ಅಧಿಕಾರವನ್ನೂ ಕಳೆದುಕೊಳ್ಳಲಿದೆ. ತಮಿಳುನಾಡು ಸರಕಾರ ಸುಪ್ರೀಂಕೋರ್ಟ್ ಅಂಗಳದಲ್ಲಿ ನಿಂತು 'ಕರ್ನಾಟಕದಿಂದ ನಮಗೆ ನೀರು ಬಿಡಿಸಿ' ಎಂದು ಬಾಯಿ ಬಡಿದುಕೊಳ್ಳುವ ಪ್ರಮೇಯವೂ ಇರುವುದಿಲ್ಲ.
ನೀರು ಪಾಲು: ಅಧಿಸೂಚನೆಯ ಫಲವಾಗಿ ಅಸ್ತಿತ್ವಕ್ಕೆ ಬರಲಿರುವ ಏಕಾಧಿಪತ್ಯದ 'ಕಾವೇರಿ ನೀರು ನಿರ್ವಹಣಾ ಮಂಡಳಿ' ತಮಿಳುನಾಡಿಗೆ ಎಷ್ಟು ಬೇಕಾದರೂ ನೀರು ಹರಿಸಬಹುದು. ಕರ್ನಾಟಕ (ಇಷ್ಟು ದಿನ ಮಾಡಿದಂತೆ) ಬಾಯ್ಮುಚ್ಚಿಕೊಂಡು ಇರಬೇಕಾಗುತ್ತದೆ. ಮುಖ್ಯ ಇಂಜಿನಿಯರ್ ಇಬ್ಬರ ಅಧ್ಯಕ್ಷತೆಯಲ್ಲಿ ಮಂಡಳಿ ಕಾರ್ಯನಿರ್ವಹಿಸಲಿದೆ.
ಕಾವೇರಿ ನದಿ ಪಾತ್ರದಲ್ಲಿ ಬರುವ ಎಲ್ಲ ಜಲಾಶಯಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಈ ಮಂಡಳಿಯ ಅಧೀನಕ್ಕೆ ಒಳಪಡಲಿವೆ. ಇದರಿಂದಾಗಿ ರಾಜ್ಯ ಸರ್ಕಾರಗಳು ಜಲಾಶಯದ ಮೇಲಿನ ಅಧಿಕಾರವನ್ನು ಕಳೆದುಕೊಳ್ಳಲಿವೆ. ಅಲ್ಲಿಗೆ ಕರ್ನಾಟಕ ಕಾವೇರಿ ಕೊಳ್ಳದ ರೈತರು ಮತ್ತು ಬೆಂಗಳೂರು ಮಂದಿಯ ಹಿತಾಸಕ್ತಿ/ಆಶೋತ್ತರಗಳು ನೀರುಪಾಲಾಗಲಿವೆ.