'ಜಲಿಯನವಾಲಾ ಬಾಗ್ ಹತ್ಯಾಕಾಂಡ ನಮ್ಗೆ ನಾಚಿಗ್ಗೇಡು'
ಅಮೃತಸರ, ಫೆ.20: ನಮ್ಮನ್ನಾಳಿದ ಬ್ರಿಟನ್ ದೇಶದ ಪ್ರಧಾನಿ ಡೇವಿಡ್ ಕೆಮರಾನ್ ಅವರು ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕರ್ನಾಟಕಕ್ಕೆ ಅನ್ವಯವಾಗುವಂತೆ ಬೆಂಗಳೂರು ಮುಂಬೈ ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸುವುದಾಗಿ ವಾಗ್ದಾನ ನೀಡಿದ್ದಾರೆ. ನಿಜಕ್ಕೂ ಅದು ಸ್ವಾಗತಾರ್ಹವೇ. ಈ ಮಧ್ಯೆ, ಇಂದು ಮತ್ತೊಂದು ಮಾತು ಹೇಳಿ ಎಲ್ಲರನ್ನೂ ಆಶ್ಚರ್ಯದ ಮಡುವಿಗೆ ತಳ್ಳಿದ್ದಾರೆ.
ಏನಪ್ಪಾ ಅಂದರೆ ಬ್ರಿಟೀಶರು ಹಾಗೆ ನಮ್ಮನ್ನಾಳುವ ಕಾಲದಲ್ಲಿ ಒಂದಲ್ಲ, ಎರಡಲ್ಲ ಅಸಂಖ್ಯಾತ ಅಮಾನವೀಯ ಕೃತ್ಯಯಗಳನ್ನು ಭಾರತೀಯ ಮೇಲೆ ಎಸಗಿದ್ದಾರೆ. ಅದರಲ್ಲಿ ಒಂದು ಪ್ರಮುಖವಾದುದು ಜಲಿಯನವಾಲಾ ಬಾಗ್ ನಲ್ಲಿ 1919ರ ಏಪ್ರಿಲ್ 13ರಂದು ನಡೆದ ಹತ್ಯಾಕಾಂಡ.
ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ.ಎಚ್. ಡಯರ್ ಎಂಬ ಅರಿವುಗೇಡಿ, ಕೊಬ್ಬಿದ ಸೇನಾನಿ ಅಂದು ಅಮಾಯಕ ಜನರ ಮಾರಣಹೋಮಕ್ಕೆ ಆದೇಶಿಸಿದ್ದ. ಆ ಹೇಯ ಹತ್ಯಾಕಾಂಡ ಘಟಿಸಿ 94 ವರ್ಷಗಳೇ ಉರುಳಿವೆ. ಆದರೆ ಇಂದು ಆ ಘಟನಾ ಸ್ಥಳಕ್ಕೆ (ಮೇಲಿನ ಚಿತ್ರದಲ್ಲಿ ಹತ್ಯಾಕಾಂಡ ನಡೆದ ಸ್ಥಳ) ಭೇಟಿ ನೀಡಿದ್ದ ಬ್ರಿಟೀಶ್ ಪ್ರಧಾನಿ ಕೆಮರಾನ್ ಅವರು ಆ ಘಟನೆಯನ್ನು ನೆನಪಿಸಿಕೊಂಡು ಮಮ್ಮಲಮರುಗಿದ್ದಾರೆ.
'ಛೆ! ಹಾಗೆಲ್ಲ ಆಗಬಾರದಿತ್ತು. ಬ್ರಿಟನ್ನಿನ ಇತಿಹಾಸದಲ್ಲಿ ಅದೊಂದು ನಾಚಿಕೆಗೇಡಿನ ಘಟನೆ. ಅದಕ್ಕಾಗಿ ಬ್ರಿಟನ್ ಪ್ರಧಾನಿ ನಾನಿಂದು ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಶೋಕ ವ್ಯಕ್ತಪಡಿಸಿದ್ದಾರೆ. 'ಇಷ್ಟು ವರ್ಷಗಳ ನಂತರವಾದರೂ ಜಲಿಯನವಾಲಾ ಬಾಗ್ ಘಟನೆಗೆ ಕಾರಣವಾದ ಆ ದೇಶ ವಿಷಾದ ಸೂಚಿಸಿತಲ್ಲಾ' ಎಂದು ಭಾರತೀಯರು ಸಮಾಧಾನಪಟ್ಟಿದ್ದಾರೆ.
'Jalianwala Bagh was a deeply shameful event in British history' ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರು ಜಲಿಯನವಾಲಾ ಬಾಗ್ ನ ಅತಿಥಿ ಪುಸ್ತಕದಲ್ಲಿ ಬರೆದಿದ್ದಾರೆ. ಇದೇ ವೇಳೆ, ಪ್ರಧಾನಿ ಕೆಮರಾನ್ ಅವರು ಸ್ವರ್ಣ ದೇಗುಲಕ್ಕೂ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.