ಕಾವೇರಿ ಅಧಿಸೂಚನೆ ಜಯಲಲಿತಾಗೆ ಬರ್ತ್ ಡೆ ಗಿಫ್ಟ್
ಆಯಮ್ಮನೂ ಅಷ್ಟೇ. ಈ ಅವಕಾಶವನ್ನು ಸರಿಯಾಗಿಯೇ ರಾಜಕೀಯ ದಾಳವಾಗಿ ಬಳಸಿಕೊಂಡಿದ್ದಾರೆ. ಕೇಂದ್ರ ಸರಕಾರ ಕೊನೆಗೂ ಕಾವೇರಿ ಅಧಿಸೂಚನೆ ಹೊರಡಿಸಿದ್ದು ತನ್ನ ಬುದ್ಧಿಮತ್ತೆ/ಶ್ರಮಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ.
ಇತ್ತ, ಕಾವೇರಿ ನ್ಯಾಯ ಮಂಡಳಿ ಐತೀರ್ಪು ಅಧಿಸೂಚನೆ ಕರ್ನಾಟಕಕ್ಕೆ ಮರಣಶಾಸನವಾಗಿದ್ದರೆ ಅತ್ತ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಹುಟ್ಟುಹಬ್ಬದ ಬಳುವಳಿಯಾಗಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.
ಅತ್ತ ಕೇಂದ್ರ ಸರಕಾರ ಕಾವೇರಿ ಅಧಿಸೂಚನೆಯನ್ನು ಹೊರಡಿಸುತ್ತಿದ್ದಂತೆ ಇತ್ತ ಸುದ್ದಿಗಾರರೊಂದಿಗೆ ಮಾತನಾಡಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಎಂದಿನಂತೆ 'ಇದು ತಮ್ಮದೇ ಜಯಾ' ಎಂದು ಹೇಳಿಕೊಂಡಿದ್ದಾರೆ.
ಬಳಿಕ, ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಯಾ 'ಈ ಜಯದಿಂದಲೇ ಸುಮ್ಮನಾಗಿಬಿಡಬೇಡಿ. ಜನರ ಮನ ಗೆಲ್ಲುವಂತೆ ಕೆಲಸ ಮಾಡಿ. ಜನರಿಗಾಗಿ ದುಡಿಯಿರಿ. ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ 40 ಸಂಸದೀಯ ಸ್ಥಾನಗಳನ್ನು ತನಗೆ ದಕ್ಕಿಸಿಕೊಡಿ. ಆಗ ಇಂತಹ ಹತ್ತಾರು ಕಾವೇರಿ ಜಯವನ್ನು ತಮಿಳುನಾಡು ಪರವಾಗುವಂತೆ ಮಾಡಬಹುದು' ಎಂದು AIADMK ಅಧಿನಾಯಕಿ ತಮ್ಮ ಪಕ್ಷದ ಕಟ್ಟಾಳುಗಳಿಗೆ ತಿಳಿ ಹೇಳಿದ್ದಾರೆ.