ವೀರಪ್ಪನ್ ಸಹಚರರಿಗೆ ನೇಣು: ಕಾರಣೀಭೂತ ಯಾರು?
ಮೂರನೆಯದು... ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವೀರಪ್ಪನ್ನ ನಾಲ್ವರು ಸಹಚರರಾದ ಸೈಮನ್, ಮೀಸೆಕಾರ ಮಾದಯ್ಯ, ಬಿಲ್ವೇಂದ್ರನ್ ಮಹಾರಗುಂಡ್, ಜ್ಞಾನಪ್ರಕಾಶ ಜೋಸೆಫ್ ಫಾಸಿ ಶಿಕ್ಷೆ ಎದುರು ನೋಡುತ್ತಿರುವುದು.
ಈ ನಾಲ್ವರೂ ರಾಕ್ಷಸ ಪಾತಕಿಗಳನ್ನು ಗಲ್ಲಿಗೇರಿಸುವ ಸಂಬಂಧ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅದು ಇಂದು ಇತ್ಯರ್ಥವಾಗುವ ನಿರೀಕ್ಷೆಯಿದೆ. ಒಂದು ವೇಳೆ ಸುಪ್ರೀಂ ತಡೆಯಾಜ್ಞೆ ತೆರವಾದರೆ ಯಾವುದೇ ದಿನ ನಾಲ್ವರನ್ನೂ ನೇಣು ಕುಣಿಕೆಗೆ ಹಾಕಬಹುದು.
ಆದರೆ ವಿಷಯ ಅದಲ್ಲ. ಏನಪ್ಪಾ ಅಂದರೆ ಇಷ್ಟಕ್ಕೂ ಈ ನಾಲ್ವರು ಪಾತಕಿಗಳನ್ನು ನೇಣುಗಂಬಕ್ಕೇರಿಸುವುದಕ್ಕೆ ಕಾರಣೀಭೂತರಾದವರು ಯಾರು ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಇತಿಹಾಸವನ್ನು ಸ್ವಲ್ಪ ಕೆದಕಿದಾಗ ...
ವೀರಪ್ಪನ್ ಮೇಲಿನ ಸೇಡು ತೀರಿಸಿಕೊಳ್ಳಲು ಪೊಲೀಸರೇನಾದರೂ ಈ ನಾಲ್ವರ ವಿರುದ್ಧ ಕೇಸ್ ಪುಟಪ್ ಮಾಡಿ, ಅವರಿಗೆಲ್ಲ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಂಡರಾ? ಅಥವಾ ಸರಕಾರವೇ ಮುಂದಾಗಿ ನ್ಯಾಯಾಲಯದಲ್ಲಿ ಬಡಿದಾಡಿ ಅಮಾಯಕ ಬಸ್ ಪ್ರಯಾಣಿಕರನ್ನು ಕೊಂಡ ಪಾಪಕ್ಕೆ ಇವರಿಗೆಲ್ಲ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಂಡಿತಾ? ಅಥವಾ ಸ್ವಯಂ ಪ್ರೇರಿತವಾಗಿ ಸುಪ್ರೀಂಕೋರ್ಟೇ ಇಂತಹ ಗಲ್ಲು ತೀರ್ಪು ಹೊರಬೀಳುವಂತೆ ನೋಡಿಕೊಂಡಿತಾ? ಎಂಬ ಪ್ರಶ್ನೆಗಳು ಪಾಲಾರ್ ನದಿ ಪಾತ್ರದಲ್ಲಿ ನಿಂತು ಕೇಳಿದಾಗ...
ಉಹುಃ ಇವ್ಯಾವುವೂ ಅಲ್ಲ. ಇದು ಸ್ವಯಂಭೂ. ಈ ಪಾತಕಿಗಳು ತಮ್ಮಷ್ಟಕ್ಕೆ ತಾವೇ ಗಲ್ಲು ಶಿಕ್ಷೆ ನೋಡಿಕೊಂಡಿದ್ದಾರೆ! ಅಮಾಯಕ ಜನರನ್ನು ಅತ್ಯಂತ ಯೋಜನಾಬದ್ಧವಾಗಿ ಬರ್ಬರವಾಗಿ ಹತ್ಯೆ ಮಾಡಿ, ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡರು ಅಂತಲ್ಲ.
ಅಂದರೆ ಮೇಲಿನ ಮೂರೂ ವ್ಯವಸ್ಥೆಗಳು ಅಮಾಯಕರನ್ನು ಕೊಂದ ಈ ಪಾತಕಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಬಡಿದಾಡಲಿಲ್ಲ. ಏನೋ ಅವರ ಪಾಡಿಗೆ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಾ ಜೈಲು ಕೋಣೆಯಲ್ಲಿ ಕೊಳೆಯುತ್ತಿದ್ದರು. ಆದರೆ an idle mind is the devil's workshop ಅನ್ನುವ ಹಾಗೆ ಈ ಪಾತಕಿಗಳು ಕಂಬಿ ಎಣಿಸುತ್ತಿರುವ ಕೆಟ್ಟ (ಶುಭ) ಘಳಿಗೆಯಲ್ಲಿ ...
ಖೇಲ್ ಖತಂ, ನಾಟಕ್ ಬಂದ್ : ತಮ್ಮನ್ನು ಜೀವಾವಧಿ ಶಿಕ್ಷೆಗೆ ಗುರಿಯಾಗಿಸಿರುವುದು ಅನ್ಯಾಯ ಎಂದು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿಬಿಟ್ಟರು. ಮತ್ತು ಅವರು ಮಾಡಿಕೊಂಡ ಯಡವಟ್ಟು ಅದೇ. ಸರಿ ಮೇಲ್ಮನವಿ ವಿಚಾರಣೆಗಿಳಿದ ಸುಪ್ರೀಂಕೋರ್ಟಿಗೆ ಪಾತಕಿಗಳ ಬಗ್ಗೆ ಇನ್ನೂ ಏನೇನೋ ವಿಚಾರಗಳು ಗೊತ್ತಾಗಿಬಿಟ್ಟಿತು. ಮುಖ್ಯವಾಗಿ ಈ ನಾಲ್ವರೂ ಅಂತಿಂಥ ಪಾತಕಿಗಳಲ್ಲ. ಘನಘೋರ ಅಪರಾಧಗಳನ್ನೇ ಮಾಡಿದ್ದಾರೆ.
ಅಮಾಯಕ ಬಸ್ ಪ್ರಯಾಣಿಕರನ್ನು ಅತ್ಯಂತ ವ್ಯವಸ್ಥಿತವಾಗಿ, ಪೂರ್ವ ಯೋಜನೆಯಂತೆ cold blooded murder ಮಾಡಿದ್ದಾರೆ. ಇವರನ್ನು ಸುಮ್ಮನೆ ಬಿಡಬಾರದು. ಇವರೆಲ್ಲ ಈಗ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆ ಇವರು ಎಸಗಿರುವ ಕ್ರೈರ್ಯದ ಮುಂದೆ ಏನೇನೂ ಅಲ್ಲ ಎಂಬ ತೀರ್ಮಾನಕ್ಕೆ ಬಂದ ಸುಪ್ರೀಂಕೋರ್ಟ್... ಇರಿ ನಿಮಗೆ ಮಾಡ್ತೀವಿ ಎಂದಿದ್ದೇ ... ಇವರಿಗೆ ಮರಣದಂಡನೆ ವಿಧಿಸಿ ಎಂದು ಆಜ್ಞಾಪಿಸಿತು. ಅಲ್ಲಿಗೆ ಖೇಲ್ ಖತಂ, ಪಾತಕಿಗಳ ನಾಟಕ್ ಬಂದ್ ಆಯಿತು.
ಅಂದು ವೀರಪ್ಪನ್ ಎಂಬ ಯಃಕಶ್ಚಿತ್ ಕಾಡುಗಳ್ಳ ಮತ್ತು ಈ ಪಾತಕಿಗಳ ಬೆನ್ನುಹತ್ತಿದ್ದ ಕರ್ನಾಟಕ ಪೊಲೀಸ್ ಪಡೆಯ ಮುಖ್ಯಸ್ಥ, ಗೌರವಾನ್ವಿತ ಖಡಕ್ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ಈ ಮರಣದಂಡನೆ ವೃತ್ತಾಂತವನ್ನು 'ಜನಶ್ರೀ ನ್ಯೂಸ್' ಚಾನೆಲಿನಲ್ಲಿ ಎಳೆಎಳೆಯಾಗಿ ಬಿಡಿಸಿಡುತ್ತಿದ್ದರೆ ಈ ನಾಲ್ವರಿಗೂ ತತ್ ಕ್ಷಣವೇ ಮರಣದಂಡನೆಯಾಗಲಿ ಎಂಬ ಉದ್ಘಾರ ಆಯಾಚಿತವಾಗಿ ಹೊರಬಿದ್ದಿತ್ತು.
ಮರೆತ ಮಾತು: ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೇಳಿಬರುವ ಪಾಲಾರ್ ಅಂದರೆ ಏನು? ಪಾಲಾರ್ ಎಂಬುದು ಕಾವೇರಿಯ ಉಪನದಿ. ತಮಿಳುನಾಡು ಮತ್ತು ಕರ್ನಾಟಕವನ್ನು ಬೇರ್ಪಡಿಸುವ ಗಡಿ!