ಕೊಳವೆ ಮೂಲಕ ಬರಲಿದೆ ಅಡುಗೆ ಅನಿಲ !
ಇಂತಹದ್ದೊಂದು ಮಹತ್ವದ ಯೋಜನಗೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಬೆಂಗಳೂರಿನಲ್ಲಿ ಸೋಮವಾರ ಚಾಲನೆ ನೀಡಿದ್ದಾರೆ. ಇದರಿಂದಾಗಿ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾದ ಮಹತ್ವದ ಯೋಜನೆಯಾದ ದಾಭೋಲ್-ಬೆಂಗಳೂರು ಅನಿಲ ಪೈಪ್ ಲೈನ್ ಯೋಜನೆ ಸದ್ಯ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ.
ಮಹಾರಾಷ್ಟ್ರದ ದಾಭೋಲ್ ನಿಂದ ಬೆಂಗಳೂರಿನ ಬಿಡದಿಗೆ ಪೈಪ್ ಲೈನ್ ಮೂಲಕ ಅನಿಲ ಪೂರೈಸುವ ಕಾಮಗಾರಿ ಇದಾಗಿದೆ. ಕೊಳವೆ ಮೂಲಕ ನೇರವಾಗಿ ಅಡುಗೆ ಮನೆಗಳಿಗೆ ಈಗಾಗಲೇ ನವದೆಹಲಿ, ಮುಂಬೈ, ಚೆನ್ನೈ, ಪುಣೆ, ಆಗ್ರಾ ಸೇರಿದಂತೆ 12 ಮಹಾನಗರಗಳಲ್ಲಿ ಅಡುಗೆ ಅನಿಲ ಸರಬರಾಬು ಮಾಡಲಾಗುತ್ತಿದೆ.
ಬೆಂಗಳೂರು ಹೀಗೆ ಅಡುಗೆ ಅನಿಲ ಪಡೆಯವ 13ನೇ ನಗರವಾಗಲಿದೆ. ಈಗಾಗಲೇ ನಗರದ 73 ಕಿ.ಮೀ.ವ್ಯಾಪ್ತಿಯ ಪ್ರದೇಶದಲ್ಲಿ ಕೊಳವೆ ಮಾರ್ಗ ಅಳವಡಿಸಲಾಗಿದೆ. ಕೆಲವೇ ದಿನಗಳಲ್ಲಿ ಅನಿಲ ಪೂರೈಕೆ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೆ, ದಾಭೋಲ್ ನಿಂದ ಅನಿಲ ಕೊಳವೆ ಮಾರ್ಗ ಚಿಕ್ಕೋಡಿ, ಗೋಕಾಕ್, ಧಾರವಾಡ, ದಾವಣಗೆರೆ ತುಮಕೂರು ಮೂಲಕ ಬೆಂಗಳೂರು ತಲುಪುವುದರಿಂದ ರಾಜ್ಯದ 21 ತಾಲೂಕುಗಳ 301 ಗ್ರಾಮಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆಯಾಗಲಿದೆ.
ಏನಿದು ಯೋಜನೆ : ಬೆಂಗಳೂರಿನ ರಸ್ತೆ ಸಾರಿಗೆ, ಗೃಹ ಬಳಕೆ, ವಿದ್ಯುತ್ ಉತ್ಪಾದನೆ ಇತರ ಉದ್ದೇಶಗಳಿಗಾಗಿ ಮಹಾರಾಷ್ಟ್ರದ ದಾಭೋಲ್ ನಿಂದ ನೈಸರ್ಗಿಕ ಅನಿಲ ಸರಬರಾಜು ಆಗಲಿದೆ. ದಾಭೋಲ್ ನಿಂದ ಸಾಂಗ್ಲಿ, ಕೊಲ್ಲಾಪುರ, ಚಿಕ್ಕೋಡಿ, ಗೋಕಾಕ್, ಧಾರವಾಡ, ದಾವಣಗೆರೆ, ತುಮಕೂರು ಮೂಲಕ ಈ ಪೈಪ್ ಲೈನ್ ಬಿಡದಿ ತಲುಪಿದೆ.
ಇದರ ಜೊತೆಗೆ ಬೆಳಗಾವಿ, ಹೊಸಪೇಟೆ, ಬಳ್ಳಾರಿಯನ್ನು ಪೈಪ್ ಲೈನ್ ಸಂಪರ್ಕಿಸಲಿದ್ದು, ಈ ಯೋಜನೆಯ 1000 ಕಿ.ಮೀ.ಕೊಳವೆ ಮಾರ್ಗಕ್ಕೆ 4500 ಕೋಟಿ ರೂ ವೆಚ್ಚಮಾಡಲಾಗಿದೆ.