ವೀರಪ್ಪನ್ ಸಹಚರರಿಗೆ ತಾತ್ಕಾಲಿಕ ರಿಲೀಫ್
ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರಿದ್ದ ಪೀಠ ಗಲ್ಲುಶಿಕ್ಷೆಗೆ ಎರಡು ದಿನಗಳ ಕಾಲ ತಡೆಯಾಜ್ಞೆ ನೀಡಿತು ಮತ್ತು ವಿಚಾರಣೆಯನ್ನು ಬುಧವಾರ ಫೆ.20ಕ್ಕೆ ಮುಂದೂಡಿತು.
ಇದರಿಂದಾಗಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್ ನಾಲ್ವರು ಸಹಚರರಾದ ಜ್ಞಾನಪ್ರಕಾಶನ್, ಸೈಮನ್, 'ಮೀಸೆಕಾರ್' ಮಾದಯ್ಯ ಮತ್ತು ಬಿಲವೇಂದ್ರನ್ ಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.
ಪಾಲಾರ್ ಬಳಿ 1993ರಲ್ಲಿ ನೆಲಬಾಂಬ್ ಸ್ಫೋಟಿಸಿ 15 ಪೊಲೀಸ್ ಸಿಬ್ಬಂದಿ ಸೇರಿ 22 ಜನರ ಸಾವಿಗೆ ಕಾರಣರಾಗಿದ್ದ ಈ ನಾಲ್ವರಿಗೆ ಸುಪ್ರೀಂಕೋರ್ಟ್ 2004ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಕ್ಷಮಾದಾನ ನೀಡುವಂತೆ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಫೆ.13ರಂದು ತಿರಸ್ಕರಿಸಿದ್ದರು. ಆದ್ದರಿಂದ ಇವರಿಗೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಗಿತ್ತು.
ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಸಹ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದು ಮನವಿ ಮಾಡಿದ್ದರು. ನಾಲ್ವರು ಆರೋಪಿಗಳು ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.