ವೀರಪ್ಪನ್ ಸಹಚರರ ನೇಣಿಗೆ ಕುಣಿಕೆ ಸಿದ್ಧ?
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂದಿಯಾಗಿರುವ ಜ್ಞಾನಪ್ರಕಾಶ್, ಸೈಮನ್, ಮೀಸೈಕಾರನ್ ಮಾದಯ್ಯ ಮತ್ತು ಬಿಲವೇಂದ್ರನ್ ಅವರನ್ನು ಶನಿವಾರ ರಾತ್ರಿಯೇ ಪ್ರತ್ಯೇಕ ಖಾನೆಗೆ ವರ್ಗಾವಣೆ ಮಾಡಲಾಗಿದ್ದು, ಜೈಲಿನ ವೈದ್ಯರು ಅವರ ಆರೋಗ್ಯವನ್ನು ತಪಾಸಣೆ ಮಾಡಿ ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ಪ್ರಮಾಣಪತ್ರ ನೀಡಿದ್ದಾರೆ.
ಅಲ್ಲದೆ, ಶನಿವಾರ ರಾತ್ರಿಯೇ ಎಲ್ಲರಿಗೂ ಸ್ನಾನ ಮಾಡಿ ಶುಚಿಯಾಗಲು ಹೇಳಲಾಗಿದ್ದು, ಎಲ್ಲರಿಗೂ ಸಿಹಿ ತಿನಿಸಲಾಗಿದೆ ಮತ್ತು ಅವರು ಆರೋಗ್ಯದಿಂದಿರುವಂತೆ ನಿಗಾವಹಿಸಲಾಗಿದೆ. ಗಲ್ಲಿಗೇರಿಸುವುದು ಖಚಿತವಾಗುತ್ತಿದ್ದಂತೆ ನಡೆಸಲಾಗುವ ಎಲ್ಲ ರೀತಿರಿವಾಜುಗಳನ್ನು ಈ ಹಂತಕರ ವಿಷಯದಲ್ಲಿಯೂ ಪಾಲಿಸಲಾಗಿದ್ದು, ಯಾವುದೇ ಕ್ಷಣ ಅವರು ಗಲ್ಲಿಗೇರಿಸಬಹುದಾಗಿದೆ.
ಸುಪ್ರೀಂನಿಂದ ಅರ್ಜಿ ವಜಾ : ರಾಷ್ಟ್ರಪತಿ ಅವರು ಈ ಎಲ್ಲರ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ವಕೀಲ ಕಾಲಿನ್ ಗೋನ್ಸಾಲ್ವೆನ್ಸ್ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರು ಶನಿವಾರ ತಳ್ಳಿಹಾಕಿದ್ದಾರೆ.
ಯಾವ ಆಧಾರದ ಮೇಲೆ ಕಾಡುಗಳ್ಳ ವೀರಪ್ಪನ್ ಸಹಚರರನ್ನು ಪ್ರತಿನಿಧಿಸಿ ಕ್ಷಮಾದಾನ ಅರ್ಜಿ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಿದ್ದೀರೆಂದು ನ್ಯಾಯಮೂರ್ತಿಗಳು ವಕೀಲರನ್ನು ಕೇಳಿದರು. ಯಾವುದೇ ಕ್ಷಣದಲ್ಲಿ ಅವರನ್ನು ಗಲ್ಲಿಗೇರಿಸಬಹುದು ಎಂದು ವಕೀಲರು ಮಂಡಿಸಿದ ವಾದಕ್ಕೆ, ಇದರ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ನ್ಯಾಯಮೂರ್ತಿಗಳು ವಾದವನ್ನು ತಿರಸ್ಕರಿಸಿದರು.
ಮೈಸೂರಿನ ಟಾಡಾ ನ್ಯಾಯಾಲಯ ವೀರಪ್ಪನ್ ಬಂಟರಿಗೆ ಜೀವಾವಧಿ ಶಿಕ್ಷೆ ವಿಧಿಸಿ 2001ರಲ್ಲಿ ತೀರ್ಪು ನೀಡಿತ್ತು. ಈ ಶಿಕ್ಷೆಯನ್ನು ತಳ್ಳಿಹಾಕಿ, ಈ ಹಂತಕರು ಮರಣದಂಡನೆ ಅರ್ಹರು ಎಂದು ಸುಪ್ರೀಂಕೋರ್ಟ್ 2004ರಲ್ಲಿ ಆದೇಶ ಹೊರಡಿಸಿತ್ತು. 2004ರಿಂದೀಚಿನವರೆಗೆ ಅವರ ಕ್ಷಮಾದಾನ ಅರ್ಜಿ ರಾಷ್ಟ್ರಪತಿಯವರ ಟೇಬಲ್ ಮೇಲಿತ್ತು. ಈ ಅರ್ಜಿಯನ್ನು ಪರಿಶೀಲಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇದೇ ಫೆ.13ರಂದು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.
ವೀರಪ್ಪನ್ ಸಹೋದರ ಜ್ಞಾನಪ್ರಕಾಶ್ ಸೇರಿದಂತೆ ನಾಲ್ವರನ್ನು ಗಲ್ಲಿಗೇರಿಸಬಾರದು, ಅವರ ಶಿಕ್ಷೆಯನ್ನು ಮರಣದಂಡನೆಗೆ ಇಳಿಸಬೇಕು ಎಂದು ವೀರಪ್ಪನ್ ಹೆಂಡತಿ ಮುತ್ತುಲಕ್ಷ್ಮೀ ಮತ್ತು ಮಗಳು ಪ್ರಭಾ ಖಾಸಗಿ ಟಿವಿ ಚಾನಲ್ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ. [ಗಲ್ಲಿಗೇರಿಕೆ ಎಂಬ ಡೆಡ್ಲಿ ಪ್ರೊಸೀಜರ್]