ಭಾನುವಾರ ಮಣಿಕಾಂತ್ ಅವರಿಂದ ಮತ್ತೊಂದು ಪುಸ್ತಕ
ನೀಲಿಮಾ ಪ್ರಕಾಶನ ಹೊರತಂದಿರುವ ಈ ಪುಸ್ತಕದಲ್ಲಿ ಅಪ್ಪನ ಪ್ರೀತಿ, ಮಮತೆಯ ಬಗ್ಗೆ ಅನೇಕ ಬರಹಗಳಿವೆ. ಜೊತೆಗೆ, ಎಲೆಮರೆಯ ಕಾಯಿಯಂತೆ ಇರುವ, ಹೋರಾಟವನ್ನೇ ಬದುಕಾಗಿಸಿಕೊಂಡಿರುವ 'ರಿಯಲ್ ಹೀರೋ' ಕುರಿತು ಪರಿಚಯಾತ್ಮಕ ಲೇಖನಗಳನ್ನು ಈ ಪುಸ್ತಕ ಹೊಂದಿದೆ. ಈ ರಿಯಲ್ ಹೀರೋಗಳನ್ನು ಭೇಟಿ ಮಾಡಿ, ಅವರ ಸಾಧನೆಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಭಾನುವಾರದ ಕಾರ್ಯಕ್ರಮಕ್ಕೆ ಬರಬಹುದು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಕನ್ನಡಪ್ರಭ ದಿನಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, 'ಎದ್ದೇಳು ಮಂಜುನಾಥ' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮತ್ತು 'ಚಂದ್ರಮುಖಿ ಪ್ರಾಣಸಖಿ' ಖ್ಯಾತಿ ನಟಿ ಭಾವನಾ ಅವರು ಉಪಸ್ಥಿತರಿರಲಿದ್ದಾರೆ.
ಜೊತೆಗೆ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್, ಚಿತ್ರನಟ ಅಮೀರ್ ಖಾನ್ ಅವರಂಥ ದಿಗ್ಗಜರಿಂದ ಬೆನ್ನುತಟ್ಟಿಸಿಕೊಂಡಿರುವ 'ಹೀರೋ' ಅವರ ಉಪಸ್ಥಿತಿ ಈ ಕಾರ್ಯಕ್ರಮದ ಹೈಲೈಟ್ ಆಗಲಿದೆ ಎಂದು ಒನ್ಇಂಡಿಯಾ ಕನ್ನಡಕ್ಕೆ ಮಣಿಕಾಂತ್ ಅವರು ಹೇಳಿದ್ದಾರೆ.
'ಅಮ್ಮ ಹೇಳಿದ ಎಂಟು ಸುಳ್ಳುಗಳು', 'ಈ ಗುಲಾಬಿಯು ನಿನಗಾಗಿ' ಮತ್ತು 'ಹಾಡು ಹುಟ್ಟಿದ ಸಮಯ' ಮುಂತಾದ ಪುಸ್ತಗಳನ್ನು ಈಗಾಗಲೆ ಹೊರತಂದಿರುವ ಪತ್ರಕರ್ತ ಮಣಿಕಾಂತ್ ಅವರು, ಓದುಗರನ್ನೇ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಎಂದು ಹೇಳಿದ್ದು, ಎಲ್ಲರೂ ತಪ್ಪದೆ ಕಾರ್ಯಕ್ರಮಕ್ಕೆ ಬರಬೇಕಾಗಿ ಕೇಳಿದ್ದಾರೆ. ಪುಸ್ತಕ ಬಿಡುಗಡೆಯ ಜೊತೆಗೆ ಖ್ಯಾತ ಗಾಯಕ, ಗಾಯಕಿಯರಿಂದ ಸುಮಧುರ ಗೀತೆಗಳನ್ನು ಕೇಳುವ ಅವಕಾಶವೂ ಇರಲಿದೆ.