ಪ್ರೇಮಿಗಳ ದಿನಕ್ಕೆ ಶಿವಸೇನೆ ಕಾಟ ಇಲ್ಲ!
ಮುಂಬೈ, ಫೆ.13: ವ್ಯಾಲೆಂಟೇನ್ಸ್ ಡೇ ಆಚರಿಸುತ್ತಾ ಪ್ರೇಮ ಪ್ರಪಂಚದಲ್ಲಿ ವಿಹರಿಸುವ ಪ್ರೇಮಿಗಳಿಗೂ ಶಿವಸೇನೆಗೂ ಆಗಿಬರುವುದಿಲ್ಲ. ಬಾಳಾ ಠಾಕ್ರೆಯ ದಿನಗಳಿಂದಲೂ ಆಚರಣೆಯಲ್ಲಿರುವ ಸಂಪ್ರದಾಯವಿದು. ಆದರೆ ಬಾಳಾ ಠಾಕ್ರೆ ನಿಧನಾನಂತರ ಶಿವಸೇನೆಯಿಂದ ಪ್ರೇಮಿಗಳ ದಿನಾಚರಣೆಗೆ ಬಿಸಿಯುಪ್ಪುಗೆ ದೊರೆತಿದೆಯೇ?
ಹಾಗೇ ಅನ್ನಿಸುತ್ತಿದೆ. ಪಶ್ಚಿಮ ಮುಂಬೈನ ಬೊರಿವಿಲಿಯ ಶಿವಸೇನೆ ಕಾರ್ಪೊರೇಟರ್ ಅಭಿಷೇಕ್ ಘೋಸಲಕರ್ ನಾಳೆ ಫೆ 14ರಂದು ಪ್ರೇಮಿಗಳ ದಿನಾಚರಣೆ ಹಸೆಮಣೆ ಏರಲಿದ್ದಾರೆ. ಇದರಿಂದ 'ಕಾಲಾಂತರದಲ್ಲಿ ಪ್ರೇಮ ಎಲ್ಲವನ್ನೂ ಗೆಲ್ಲುತ್ತದೆ' ಎಂಬ ಮಾತು ಶಿವಸೇನೆಗೆ ಒಪ್ಪಿತವಾಯಿತೇ?
ಶಿವಸೇನೆಯ ಅಷ್ಟೂ ಅಧಿನಾಯಕರಲ್ಲದೆ ಅನೇಕ ಪ್ರಮುಖ ರಾಜಕಾರಣಗಳು, ಬಾಲಿವುಡ್ ಗಣ್ಯರು ಈ ಅರೇಂಜ್ಡ್ ಮ್ಯಾರೇಜ್ ಗೆ ಸಾಕ್ಷಿಯಾಗಲಿದ್ದಾರೆ. ಗಮನಾರ್ಹವೆಂದರೆ ಮದುವಣಗಿತ್ತಿ ಕುಟುಂಬ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ.
ಠಾಕ್ರೆ ಇಲ್ಲದ ಮೊದಲ ವ್ಯಾಲೆಂಟೇನ್ಸ್ ಡೇ!: 'ವ್ಯಾಲೆಂಟೇನ್ಸ್ ಡೇ ದಿನದಂದೇ ಮದುವೆಯಾಗುತ್ತಿದ್ದೇವೆ ಅಂತೇನೂ ಅಲ್ಲ. ಹಿರಿಯರು ನಿಶ್ಚಯಿಸಿದ ಮಹೂರ್ತದಂದು ಮದುವೆಯಾಗುತ್ತಿದ್ದೇವೆ ಅಷ್ಟೇ' ಎಂದು ಕಾರ್ಪೊರೇಟರ್ ಅಭಿಷೇಕ್ ಹೇಳಿದ್ದಾರೆ.
ಈ ಹಿಂದೆ ಬಾಳಾ ಠಾಕ್ರೆಯ ಕಾಲದಲ್ಲಿ ಶಿವ ಸೈನಿಕರು 'ವ್ಯಾಲೆಂಟೇನ್ಸ್ ಡೇ ದಿನ ಕಣ್ಣಿಗೆ ಬಿದ್ದ ಪ್ರೇಮಿಗಳನ್ನು ಅಟ್ಟಾಡಿಸಿಕೊಂಡು ಬಡಿಯುತ್ತಿದ್ದರು. ಹೂವಿನಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದರು. ಠಾಕ್ರೆ ಇಲ್ಲದ ಮೊದಲ ವ್ಯಾಲೆಂಟೇನ್ಸ್ ಡೇ ಇದು. ಪ್ರೇಮಿಗಳ ಮೇಲೆ ಹಲ್ಲೆ ನಡೆಸುವ ಸಂಪ್ರದಾಯಕ್ಕೆ ಶಿವ ಸೈನಿಕರು ನಾಳೆ ತಿಲಾಂಜಲಿ ಇಡಲಿದ್ದಾರಾ?