ಪಕ್ಷೇತರರ 'ಕೈ' ಹಾದಿ ಅಷ್ಟೊಂದು ಸುಗಮವಲ್ಲ
ಮುಖ್ಯವಾಗಿ ಪಕ್ಷೇತರ ಶಾಸಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅಪಾರ ಸಂಖ್ಯೆಯಲ್ಲಿದ್ದು, ಅವರೆಲ್ಲ ಈ ಪಕ್ಷೇತರ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುವುದರ ವಿರುದ್ಧ ಸಿಡಿದೆದ್ದಿದ್ದಾರೆ. ಮೊದಲಿನಿಂದಲೂ ನಾವು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದೇವೆ. ಇವರಿಂದ ರಾಜ್ಯದ ಜನತೆಗೆ ಕಳೆದೈದು ವರ್ಷಗಳಲ್ಲಿ ಆಗಿರುವ ಅನ್ಯಾಯ ಸಾಕಷ್ಟಿದೆ. ಈಗ ಅವರಿಗೆ ಟಿಕೆಟ್ ನೀಡಿದರೆ ನಮಗೂ ಅನ್ಯಾವಾಗುವುದಿಲ್ಲವೇ?' ಎಂದು ಅವರು ಪಟ್ಟು ಹಿಡಿದಿದ್ದಾರೆ.
ಇನ್ನು ಕೆಲವು ಕ್ಷೇತ್ರಗಳಲ್ಲಿ ಕೇವಲ ತಮ್ಮ ನಾಯಕರ ಮನವೊಲಿಸಿದರೆ ಸಾಲದು, ದೇವಾನುದೇವತೆಗಳ ಅನುಗ್ರಹವೂ ಬೇಕಾದೀತು ಎಂದು ಸಿಕ್ಕಸಿಕ್ಕ ದೇವಸ್ಥಾನಗಳಲ್ಲಿ ಪೂಜಾಕೈಂಕರ್ಯ ನಡೆಸಿದ್ದಾರೆ.
ಈ ಬಗ್ಗೆ ಚರ್ಚಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಆಮಂತ್ರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಫೆ. 15 ಮತ್ತು 16ರಂದು ಈ ಸಭೆ ನಡೆಸಲಿದ್ದಾರೆ.
ಪಾವಗಡದ ಪಕ್ಷೇತರ ಶಾಸಕ ವೆಂಕಟರಮಣಪ್ಪ ಅವರೀಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಇಲ್ಲವಾದಲ್ಲಿ ತಮ್ಮ ಪುತ್ರ ಬ್ಯಾಡನೂರು ಜಿಪಂ ಸದಸ್ಯ ಹೆಚ್ ವಿ ವೆಂಕಟೇಶ್ ಅವರಿಗಾದರೂ ಟಿಕೆಟ್ ಸಿಗಲಿ ಎಂಬ ಆಕಾಂಕ್ಷೆ ಹೊತ್ತಿದ್ದಾರೆ. ಆದರೆ ಇವರಿಗೆ ಟಿಕೆಟ್ ಕೈತಪ್ಪಲಿ ಎಂದು ಸ್ಥಳೀಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ನಡೆದಿದ್ದಾರೆ.
ಮೂರು ಬಾರಿ ವಿಧಾನಸಭಾ ಸದಸ್ಯರಾಗಿಯೂ ಶಾಸಕ ವೆಂಕಟರಮಣಪ್ಪ, ಇದುವರೆಗೆ ಜನಹಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದ ಕಾರಣ ಪಾವಗಡ, ರಾಜ್ಯದ ಅತಿ ಹಿಂದುಳಿದ ತಾಲೂಕಾಗಿ ಉಳಿದೆ ಎಂಬುದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಡಾ. ಡಿ ಪರಮೇಶ್ ನಾಯ್ಕ, ಕೋರ್ಟ್ ನರಸಪ್ಪ, ಡಾ. ಸೇವಾ ನಾಯ್ಕ ಅವರುಗಳ ಆರೋಪ.
ಪಾವಗಡ ತಾಲೂಕಿನ ಶನೇಶ್ವರ ದೇವಸ್ಥಾನ, ನಾಗಲಮಡಿಕೆಯ ಸುಬ್ರಮಣ್ಯೇಶ್ವರ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ ಮತ್ತಿತರೆ ದೇವಸ್ಥಾನಗಳಲ್ಲಿ ಕಾಂಗ್ರೆಸ್ ನಾಯಕರು ಪೂಜೆ ಸಲ್ಲಿಸಿ, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.