ಹೊಸಕೋಟೆಯಲ್ಲಿ ಡಿವಿಜಿ ಜ್ಞಾನವಾಹಿನಿ ಬೆಂ. ವಿವಿ
ಹೊಸ ವಿವಿ ವ್ಯಾಪ್ತಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 316 ಕಾಲೇಜುಗಳು ಇರಲಿವೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2013ನ್ನು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಮಂಡಿಸಿದರು. ಈ ನಾಲ್ಕೂ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಕಾಲೇಜುಗಳು ಈ ನೂತನ ವಿವಿ ವ್ಯಾಪ್ತಿಗೆ ಬರಲಿದ್ದು, ಉಳಿದಂತೆ ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ಮತ್ತು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಎಂದಿನಂತೆ ಜ್ಞಾನಭಾರತಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಮೂಲಕ ದೇಶದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಮ್ಮೆ ವಿಭಜನೆಯಾಗಿ ತನ್ನ ಗಾತ್ರವನ್ನು ಕಡಿಮೆ ಮಾಡಿಕೊಂಡಿದೆ.
ಈ ವಿಶ್ವವಿದ್ಯಾ ಲಯಕ್ಕೆ ಸಾಹಿತಿ ಡಿ.ವಿ.ಗುಂಡಪ್ಪನವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಸದ್ಯ ಹೊಸ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯು ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಕಾರ್ಯ ನಿರ್ವಹಿಸಲಿದೆ. 5 ವರ್ಷಗಳಲ್ಲಿ ಎಲ್ಲ ಮೂಲಭೂತ ಸೌಯರ್ಕಗಳು ಅಭಿವೃದ್ಧಿ ಹೊಂದಿದ ನಂತರ ಕಾರ್ಯಾಲಯವನ್ನು ಹೊಸ ಕೋಟೆಗೆ ಸ್ಥಳಾಂತರ ಗೊಳಿಸಲಾಗುವುದು ಎಂದು ರವಿ ತಿಳಿಸಿದರು.
ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಆನೇಕಲ್ಲು, ಬೆಂಗಳೂರು ದಕ್ಷಿಣ ತಾಲೂಕು ಹಾಗೂ ರಾಮನಗರ ಜಿಲ್ಲೆಯ ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಸೆಂಟ್ರಲ್ ಕಾಲೇಜು ಹಳೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಉಳಿಯಲಿದೆ. ಇದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಲು ತೀರ್ಮಾನಿಸಲಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ವಿವರಿಸಿದರು.
ಹೋಸಕೋಟೆ ಸಮೀಪದ ದೇವನಹಳ್ಳಿ ಮೂಲದ ಡಿವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ, ಕನ್ನಡ ಭಗವದ್ಗೀತೆ ಎಂದೇ ಲೋಕಖ್ಯಾತಿ ಗಳಿಸಿದೆ. ಕವಿ, ದಾರ್ಶನಿಕ, ಸಾಹಿತಿ, ಸಮಾಜ ಸೇವಕ, ಪತ್ರಕರ್ತ ಹೀಗೆ ನಾನಾ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಡಿವಿ ಗುಂಡಪ್ಪ ಅವರ ಹೆಸರು ವಿವಿಗೆ ಇಡುವ ಮೂಲಕ ಅವರಿಗೆ ಸೂಕ್ತ ಗೌರವ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಸಿಟಿ ರವಿ ಹೇಳಿದರು.
ಸದ್ಯ ಬೆಂಗಳೂರು ವಿವಿ ವ್ಯಾಪ್ತಿಗೆ ಸುಮಾರು 760ಕ್ಕೂ ಹೆಚ್ಚು ಕಾಲೇಜುಗಳು ಒಳಪಡುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ಶಿಕ್ಷಣ ಗುಣಮಟ್ಟ ಕಾಪಾಡಿಕೊಳ್ಳಲು, ಪರೀಕ್ಷೆ ನಡೆಸಲು ಕೂಡಾ ಕಷ್ಟವಾಗುತ್ತಿದೆ. 250 ಕಾಲೇಜುಗಳಿಗೆ ಒಂದು ವಿ.ವಿಯನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.