ದೇವೇಗೌಡ ನಿಜಕ್ಕೂ ಮುತ್ಸದ್ದಿ: ಸಿಎಂ ಶೆಟ್ಟರ್
'ಎಚ್ಡಿ ದೇವೇಗೌಡ ಅವರು ಕಾವೇರಿ ನದಿ ವಿಚಾರದಲ್ಲಿ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ತಮ್ಮ ಅಪಾರ ಅನುಭವವನ್ನು ಆಗಾಗ್ಗೆ ರಾಜ್ಯ ಸರಕಾರಕ್ಕೆ ನೀಡುತ್ತಾ ಬಂದಿದ್ದಾರೆ. ಮೊನ್ನೆಯೂ ಅಷ್ಟೇ ಖುದ್ದಾಗಿ ತಾವೇ ಬಂದು ಉಪಯುಕ್ತ ಸಲಹೆ ನೀಡಿದ್ದಾರೆ. ಅವರೊಬ್ಬ Statesman' ಎಂದು ಸಿಎಂ ಶೆಟ್ಟರ್ ಕೆಳಮನೆಯಲ್ಲಿ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್ ಅವರು, ದೇವೇಗೌಡ ಅವರು ಒಬ್ಬ ಅನುಭವಿ ನಾಯಕರು. ಅವರು ಪ್ರಧಾನಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಿನ್ನೆ ತಮ್ಮನ್ನು ಭೇಟಿ ಮಾಡಿದ ಗೌಡರು, ಕಾವೇರಿ ವಿಚಾರವಾಗಿ ಕೆಲವು ಪ್ರಮುಖ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಈ ವಿಚಾರದಲ್ಲಿ ಅವರು ರಾಜಕೀಯ ಮಾಡಿಲ್ಲ. ನೀರಾವರಿ ಹಾಗೂ ರಸ್ತೆ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಬಾಯಿಗೆ ಕಪ್ಪು ಬಟ್ಟೆ: ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ದೇವೇಗೌಡರು ಇಂದು ಬೆಳಗ್ಗೆ ಬನ್ನಪ್ಪ ಪಾರ್ಕ್ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ 11.30ಕ್ಕೆ ಪಾದಯಾತ್ರೆ ಆರಂಭಿಸಿದರು. ಈ ವೇಳೆ, ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಚಲುವರಾಯಸ್ವಾಮಿ ಸೇರಿದಂತೆ ಅನೇಕರು ಗೌಡರ ಜತೆ ಹೆಜ್ಜೆ ಹಾಕಿದರು.
ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದ ದೇವೇಗೌಡರಿಗೆ ಸಾವಿರಾರು ಮಂದಿ ಸಾಥ್ ನೀಡಿದರು. ಪಾದಯಾತ್ರೆಯಲ್ಲಿ ಭಾವಗಿಸಿರುವ ಮಹಿಳೆಯರು ಖಾಲಿ ಬಿಂದಿಗೆಗಳನ್ನು ತಲೆಯೆ ಮೇಲೆ ಹೊತ್ತು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮೌನವಾಗಿ ಪ್ರತಿಭಟಿಸಿದರು.