ಕೋಲಾರ:ಅನಿಲ ಟ್ಯಾಂಕರ್ ಸ್ಪೋಟ,ಹಲವು ಸಾವು
ಪ್ರಾಥಮಿಕ ವರದಿಯ ಪ್ರಕಾರ ವಿಜಯವಾಡದಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಕಾರ್ಬನ್ ಡಯಾಕ್ಸೈಡ್ ತುಂಬಿಸಿಕೊಂಡು ಬರುತ್ತಿದ್ದ ಟ್ಯಾಂಕರಿನಲ್ಲಿ ಅನಿಲ ಸೋರಿಕೆಯಾಗಿ ಬೆಂಗಳೂರಿನಿಂದ ತಿರುಪತಿ ಕಡೆಗೆ ಹೋಗುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಪೋಲೀಸರು ಮತ್ತು ಎರಡು ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಸ್ಪೋಟದ ರಭಸಕ್ಕೆ ದೇಹಗಳು ಮಾಂಸದ ಮುದ್ದೆಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಗಾಯಗೊಂಡ ಒಬ್ಬನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಸ್ಪೋಟದ ತೀವ್ರತೆಗೆ ಹಲವು ಮರಗಳು ಉರುಳಿವೆ. ಘಟನೆ ಸಂಭವಿಸಿದ ಎರಡೂ ಕಡೆ ಪೆಟ್ರೋಲ್ ಬಂಕುಗಳಿದ್ದು ಪವಾಡಸದೃಶ ರೀತಿಯಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಲಿಲ್ಲ.
ಬೆಂಗಳೂರು ಮತ್ತು ಚೆನ್ನೈ ನಡುವಣ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸ್ಪೋಟದಲ್ಲಿ ಒಂದು ಸ್ಕೂಲ್ ಬಸ್, ಎರಡು ಲಾರಿ ಮತ್ತು ಒಂದು ಟಾಟಾಸುಮೋ ಛಿದ್ರಛಿದ್ರವಾಗಿವೆ. ಘಟನೆ ನಡೆದ ಸುತ್ತಮುತ್ತಲ ಎರಡು ಕೀಲೋಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಪೊರೈಕೆ ಸ್ಥಗಿತಗೊಳಿಸಲಾಗಿದೆ.
ಪೋಲೀಸರು ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯನ್ನು ವೀಕ್ಷಿಸಲು ಸಾರ್ವಜನಿಕರು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಲಾಠಿಪ್ರಹಾರ ನಡೆಸಿದ್ದಾರೆ.