ತೀರ್ಥಕ್ಷೇತ್ರದಲ್ಲಿ ರಾಜಕೀಯಕ್ಕೆ ಅರ್ಚಕರ ವಿರೋಧ
ಇತ್ತೀಚೆಗೆ ಅಲಹಾಬಾದ್ ನ ಕುಂಭಮೇಳದಲ್ಲಿ ಭಾಗವಹಿಸಿದ್ದ ವಿಹೆಚ್ ಪಿ ನಾಯಕ ಅಶೋಕ್ ಸಿಂಘಾಲ್, ಸಾಧು ಸಂತರ ಸಭೆಯಲ್ಲಿ " ನರೇಂದ್ರ ಮೋದಿ ಹಿಂದೂ ಹೃದಯ ಸಾಮ್ರಾಟ. ಅವರು ಪ್ರಧಾನಿ ಅಭ್ಯರ್ಥಿಯಾಗಲು ನಮ್ಮ ಬೆಂಬಲವಿದೆ. ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದು ಪಕ್ಷಕ್ಕೆ ಬಿಟ್ಟಿರುವ ವಿಷಯ" ಎಂದು ಹೇಳಿಕೆ ನೀಡಿದ್ದರು.
ಅಶೋಕ್ ಸಿಂಘಾಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಭಾರತ ಸಾಧು ಸಮಾಜದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಹರಿನಾರಾಯಣನಂದ, ಸಾಧು ಸಂತರ ಸ್ಥಳದಲ್ಲಿ ಅಶೋಕ್ ಸಿಂಘಾಲ್ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಸಾಧುಗಳು ತುಂಬಿದ ಸಭೆಯಯಲ್ಲಿ, ಅದರಲ್ಲೂ ಅಲಹಾಬಾದ್ ನಂತಹ ಪುರಾಣ ಕ್ಷೇತ್ರದಲ್ಲಿ ರಾಜಕೀಯದ ಬಗ್ಗೆ ಮಾತನಾಡಬಾರದು. ಹಿಂದೂ ಸಾಧುಗಳ ಸಮ್ಮುಖದಲ್ಲಿ ನರೇಂದ್ರ ಮೋದಿಯವರನ್ನು ಹಿಂದೂ ಹೃದಯ ಸಾಮ್ರಾಟ ಎಂದಿರುವುದು ತಪ್ಪು.
ಇದರಿಂದ ಕಟ್ಟುನಿಟ್ಟಿನ ವೃತ ಆಚರಿಸಿಕೊಂಡು ಬಂದ ಹಿಂದೂ ಸಾಧುಗಳಿಗೆ ಅವಮಾನ ಮಾಡಿದಂತಾಗುತ್ತದೆ. ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರು ಅವರಂತೆ ಮೋದಿ ಜನಪ್ರಿಯತೆ ಗಳಿಸಿರುವುದು ನಿಜ. ಭಾರತದ ಜನರು ಮೋದಿ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಆದರೆ, ಇಂತಹ ವಿಷಯವನ್ನು ಪುರಾಣ ಕ್ಷೇತ್ರದಲ್ಲಿ ಹೇಳುವ ಅಗತ್ಯವಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಯು ಪಕ್ಷದವರು ನರೇಂದ್ರ ಮೋದಿಯವರನ್ನು ಎನ್ ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಹೇಳುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಜ್ಯಾತ್ಯಾತೀತತೆ ಪರವಾದ ಅಭಿಪ್ರಾಯ ಹೊಂದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಸಾಧು ಸಂತರ ಸಭೆಯಲ್ಲಿ ಹಿಂದೂ ಹೃದಯ ಸಾಮ್ರಾಟ ಎಂದು ಬಣ್ಣಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)