ಕುಂಭಮೇಳ ದುರಂತ: ಕಾಲ್ತುಳಿತಕ್ಕೆ ಭಕ್ತಾದಿಗಳ ಬಲಿ
ಅಲಹಾಬಾದ್, ಫೆ.10: ಕೊನೆಗೂ ಕುಂಭಮೇಳ ಮೊದಲ ಬಲಿ ಪಡೆದಿದೆ. ಜ.14ರಿಂದ ಯಾವುದೇ ಜೀವ ಹಾನಿ ಇಲ್ಲದೆ ಸಾಗಿದ್ದ ಮೇಳಕ್ಕೆ ಈಗ ಸೂತಕದ ಛಾಯೆ ತಟ್ಟಿದೆ. ಮೌನಿ ಅಮಾವಾಸ್ಯೆಯ ದಿನವಾದ ಇಂದು ಸಂಜೆ ಸಂಗಮದಲ್ಲಿ ಪುಣ್ಯ ಸ್ನಾನ ಜಾರಿಯಲ್ಲಿರುವಂತೆಯೇ ಕಾಲ್ತುಳಿತ ದುರಂತ ನಡೆದಿದೆ.
ಮೌನಿ ಅಮಾವಾಸ್ಯೆ ಸ್ನಾನ ಮುಗಿಸಿಕೊಂಡು ಬಂದಿದ್ದ ಅಸಂಖ್ಯಾತ ಭಕ್ತರು ಅಲಹಾಬಾದಿನ ರೈಲ್ವೆ ನಿಲ್ದಾಣದಲ್ಲಿ ನೆರೆದಿದ್ದರು. ಜನದಟ್ಟಣೆ ಹೆಚ್ಚಾಗಿದ್ದರಿಂದ ಫ್ಲಾಟ್ ಫಾರ್ಮ್ 6ರ ಓವರ್ ಬ್ರಿಡ್ಜ್ ಕುಸಿತ ಉಂಟಾದ ಕಾರಣ ಗೊಂದಲ ಉಂಟಾಗಿದೆ. ಸಂಜೆ ಸುಮಾರು 7 ಗಂಟೆಗೆ ಪೊಲೀಸರು ಜನರ ಗುಂಪನ್ನು ಚದುರಿಸಲು ಲಾಠಿ ಚಾರ್ಚ್ ಮಾಡಿದ್ದಾರೆ. ರೈಲ್ವೆ ನಿಲ್ದಾಣದ ಹೊರಗಡೆ ಇದ್ದ ಜನ ಜಂಗುಳಿ ಇದರಿಂದ ಚದುರಿದೆ.
ದಾರಗಂಜ್ ನಿಲ್ದಾಣದಲ್ಲಿ ನಡೆದ ಈ ದುರ್ಘಟನೆಯಲ್ಲಿ ಕರ್ನಾಟಕ ಮೂಲದ ಯಾವ ಭಕ್ತರು ಇರಲಿಲ್ಲ ಎಂಬ ಸುದ್ದಿ ಸಿಕ್ಕಿದೆ. ಕರ್ನಾಟಕದ ಕಡೆಯಿಂದ ಭಕ್ತರೆಲ್ಲರೂ ಸಂಗಮಿತ್ರ, ನಿಲ್ದಾಣದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಪ್ರತ್ಯಕ್ಷದರ್ಶಿ ಚಿದಾನಂದ ಎಂಬುವರಿಂದ ಸಿಕ್ಕಿದೆ.
ಕಾಲ್ತುಳಿತದಲ್ಲಿ ಸುಮಾರು 36 ಮಂದಿ ಸಾವನ್ನಪ್ಪಿರುವ ಸುದ್ದಿ ಸಿಕ್ಕಿದೆ. ಸುಮಾರು 40ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸುಮಾರು 8.30ರ ಸುಮಾರಿಗೆ ಜರುಗಿದೆ. 3 ರಿಂದ 6 ಜನ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ. ಈ ವರೆಗೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದು ಸಿಎನ್ ಎನ್ ಐಬಿಎನ್ ವರದಿ ಮಾಡಿದೆ. [ಮೌನಿ ಅಮಾವಾಸ್ಯೆಗೆ: 3 ಕೋಟಿ ಭಕ್ತರು]
ಸುಮಾರು 40-50 ಸಾವಿರ ಜನರನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವುಳ್ಳ ರೈಲ್ವೆ ನಿಲ್ದಾಣಕ್ಕೆ ಒಮ್ಮೆಗೆ 2-3 ಲಕ್ಷ ಜನ ನುಗ್ಗಿದ ಪರಿಣಾಮ ಜನದಟ್ಟಣೆ ಹೆಚ್ಚಾಗಿ ಈ ದುರಂತ ನಡೆದಿದೆ ಎನ್ನಲಾಗಿದೆ. ದುರಂತ ಸಂಭವಿಸಿ ಮುರ್ನಾಲ್ಕು ಗಂಟೆಗಳಾದರೂ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಕೆಲವರು ಸಾವನ್ನಪ್ಪಿದ ದಾರುಣ ಘಟನೆಯೂ ನಡೆದಿದೆ.
ಮೌನಿ ಅಮಾವಾಸ್ಯೆ, ಮಹಾ ಕುಂಭಮೇಳದ ಪುಣ್ಯದಿನಗಳಲ್ಲಿ ಒಂದಾಗಿದೆ. ಜನವರಿ 14ರಂದು ಮಕರ ಸಂಕ್ರಾಂತಿ ದಿನ ಮುಳುಗೆದ್ದಿದ್ದ ನಾಗಾ ಸಾಧುಗಳು ಇಂದು ಕೂಡಾ ಎಲ್ಲರಿಗಿಂತ ಮೊದಲು ಪುಣ್ಯ ಸ್ನಾನ ಪಡೆದು ಪುಳಕಿತಗೊಂಡರು. ನಂತರ ಇತರೆ ಭಕ್ತಾದಿಗಳು ತಂಡೋಪತಂಡವಾಗಿ ಸಂಗಮದಲ್ಲಿ ಮುಳುಗು ಹಾಕಿದ್ದರು. ಆರಂಭದ ಆವಧಿಯಲ್ಲೇ ವಿವಿಧ ಅಖಾರಗಳಲ್ಲಿ ಸುಮಾರು 20 ಲಕ್ಷ ಜನ ಪುಣ್ಯ ಸ್ನಾನ ಪಡೆದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸ್ಥಳೀಯ ಅಡಳಿತಾಧಿಕಾರಿಗಳು ಹೇಳಿದ್ದಾರೆ. ದಿನದ ಕೊನೆಗೆ ಸುಮಾರು 3 ಕೋಟಿ ಜನ ಪುಣ್ಯ ಸ್ನಾನ ಪಡೆಯುವ ನಿರೀಕ್ಷೆಯಿದೆ.
12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಅಭೂತಪೂರ್ವ ಸುರಕ್ಷತೆ ಒದಗಿಸಲಾಗಿದೆ. ಸುಮಾರು 17,000 ಸಿಬ್ಬಂದಿ ಭಕ್ತಾದಿಗಳ ರಕ್ಷಣೆಗೆ ಟೊಂಕ ಕಟ್ಟಿಕೊಂಡು ನಿಂತಿದ್ದಾರೆ. ಐಟಿಬಿಪಿ, ಸಿಆರ್ ಪಿಎಫ್, ಬಿಎಸ್ ಎಫ್ ಹಾಗೂ ಆರ್ ಎಎಫ್ ಪಡೆಗಳ ಜೊತೆಗೆ ಉತ್ತರ ಪ್ರದೇಶದ ಪೊಲೀಸರು ಈ ಪವಿತ್ರ ಸ್ನಾನಕ್ಕೆ ರಕ್ಷಣೆ ಒದಗಿಸಿದ್ದಾರೆ.