ಕೆಎಸ್ಸಾರ್ಟಿಸಿ ಬಸ್ಸಿಗೆ ಸುಮೋ ಡಿಕ್ಕಿ, 4 ಸಾವು
ಟಾಟಾ ಸುಮೋ ವಾಹನದ ಆಕ್ಸೆಲ್ ಮುರಿದು ಬಿದ್ದು ಡಿವೈಡರ್ ಡಿಕ್ಕಿ ಹೊಡೆದು ಹಾರಿ ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದೆ. ನಂತರ ವಾಹನ ಪಲ್ಟಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ಟಿ.ಎಂ.ಹೊಸೂರು ಗೇಟ್ ಬಳಿ ಸಂಭವಿಸಿದೆ.
ಚಾಲಕ ಸೇರಿದಂತೆ 8 ಮಂದಿ ಗಾಯಗೊಂಡಿದ್ದು, ಮಂಡ್ಯ ಸರ್ಕಾರಿ ಆಸ್ಪತ್ರೆ ಹಾಗೂ ಮೈಸೂರು ಕೆ.ಆರ್ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಮೃತರನ್ನು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲಾರಿ ಪೇಟೆಯ ನಿವಾಸಿಗಳೆಂದು ಹೇಳಲಾಗಿದ್ದು, ಮೂಲತಃ ಪಶ್ಚಿಮ ಬಂಗಾಳದವರು ಎಂದು ಪೊಲೀಸರು ತಿಳಿದು ಬಂದಿದೆ.
ಸ್ನೇಹಿತರ ಮೂಲಕ ಸುಮೋ ವಾಹನವನ್ನು ಬಾಡಿಗೆಗೆ ಪಡೆದು ಇಂದು ಮುಂಜಾನೆ 11 ಮಂದಿ ಮೈಸೂರು ಕಡೆಗೆ ತೆರಳಿದ್ದಾರೆ. ಮಾರ್ಗ ಮಧ್ಯೆ ಮದ್ದೂರು ಬಳಿ ಎಲ್ಲರೂ ತಿಂಡಿ ತಿಂದು ನಂತರ ಪಯಣ ಆರಂಭಿಸಿದ್ದಾರೆ.
ಶ್ರೀರಂಗಪಟ್ಟಣ ಸಮೀಪಿಸುತ್ತಿದ್ದಂತೆ ತಿರುವಿನ ಬಳಿ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಆಕ್ಸಿಲ್ ಕಟ್ಟಾಗಿದೆ. ನಂತರ ರಸ್ತೆ ದಾಟಿ ಜಿಗಿದು ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ.
ಮೃತರ ಹೆಸರು ಇನ್ನು ತಿಳಿದು ಬಂದಿಲ್ಲ. ಅಪಘಾತದಲ್ಲಿ ವಾಹನದ ಚಾಲಕ ಅಪಾಯದಿಂದ ಪಾರಾಗಿದ್ದು, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಸ್ನೇಹಿತರೊಬ್ಬರು ಬಾಡಿಗೆ ಕಳುಹಿಸಿದ್ದರು. ಅವರ ವಿಳಾಸ, ದೂರವಾಣಿ ಗೊತ್ತಿಲ್ಲ ಎಂದು ಆ ಚಾಲಕ ತಿಳಿಸಿದ್ದಾನೆ ಎಂದು ಶ್ರೀರಂಗಪಟ್ಟಣದ ಪೊಲೀಸರು ತಿಳಿಸಿದ್ದಾರೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು 108 ಆಂಬುಲೆನ್ಸ್ಗೆ ಕರೆ ಮಾಡಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಮೃತರು ಬೆಂಗಳೂರಿನಲ್ಲಿ ಅಲಂಕಾರಿಕ ವಸ್ತುವಿನ ದಾಸ್ತಾನು ವ್ಯಾಪಾರಿಗಳೆಂದು ಪೊಲೀಸರು ತಿಳಿಸಿದ್ದಾರೆ. ಮೃತದ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ತಲಾ 50,000 ರು ನೀಡುವುದಾಗಿ ಮಂಡ್ಯ ವಿಭಾಗದ ಕೆಎಸ್ಸಾರ್ಟಿಸಿ ಅಧಿಕಾರಿಗಳು ಘೋಷಿಸಿದ್ದಾರೆ.