ನಮಕ್ ಹರಾಮ್ ಅಫ್ಜಲ್ ಗುರು ನಿರ್ನಾಮ
ನವದೆಹಲಿ, ಫೆ.9: ಮುಂಬೈ ದಾಳಿಕೋರ ಕಸಬ್ ನನ್ನು ಸದ್ದಿಲ್ಲದೆ ಗಲ್ಲುಗೇರಿಸಿದಂತೆ ಸಂಸತ್ ಮೇಲಿನ ದಾಳಿಯ ರೂವಾರಿ 43 ವರ್ಷದ ಅಫ್ಜಲ್ ಗುರುನನ್ನು ಸಹ ಇಂದು ಬೆಳಗ್ಗೆ 8 ಗಂಟೆಯಲ್ಲಿ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ.
ತಾಜಾ ವರದಿಗಳ ಪ್ರಕಾರ ಕೇಂದ್ರ ಗೃಹ ಕಾರ್ಯದರ್ಶಿ ಆರ್ ಕೆ ಸಿಂಗ್ ಅವರು ಅಫ್ಜಲ್ ಗುರುನನ್ನು ಇಂದು ಬೆಳಗ್ಗೆ ನೇಣಿಗೆ ಹಾಕಿರುವುದನ್ನು ಖಚಿತಪಡಿಸಿದ್ದಾರೆ. ಇದನ್ನು ಕೇಳಿ ಜನ ಸಂಭ್ರಮಿಸತೊಡಗಿದ್ದಾರೆ.
2001 ಡಿಸೆಂಬರ್ 13ರಂದು ಅಧಿವೇಶನ ನಡೆಯುತ್ತಿದ್ದಾಗಲೇ 5 ಮಂದಿ ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆಸಿ, 12 ಮಂದಿಯ ಸಾವಿಗೆ ಕಾರಣವಾಗಿದ್ದ ಜೈಷೆ ಮೊಹಮದ್ ಉಗ್ರ ಸಂಘಟನೆಯ ಭಯೋತ್ಪಾದಕನೇ ಈ ಅಫ್ಜಲ್ ಗುರು. ವೈದ್ಯ ಪದವಿ ಪಡೆದಿದ್ದ ಅಫ್ಜಲ್ ಗುರು, ಐಎಎಸ್ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದ. ಆದರೆ ಭಯೋತ್ಪಾದನೆಯ ಜಾಲದಲ್ಲಿ ಸಿಕ್ಕಿಬಿದ್ದ.
ಕೇಂದ್ರ ಗೃಹ ಸಚಿವಾಲಯದಿಂದಾಗಲಿ ಅಥವಾ ತಿಹಾರ್ ಜೈಲಿನ ಅಧಿಕಾರಿಗಳಾಗಲಿ ಅಫ್ಜಲ್ ಗುರುನನ್ನು ಗಲ್ಲಿಗೆ ಏರಿಸಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವುದನ್ನುತಡಮಾಡಿತಾದರೂ ಇದೀಗ ಖಚಿತಪಡಿಸಿದೆ. ಕಸಬ್ ವಿಷಯದಲ್ಲೂ ಸರಕಾರ ಇಂತಹುದೇ ನಿರ್ಧಾರ ತೆಗೆದುಕೊಂಡಿತ್ತು ಎಂಬುದು ಗಮನಾರ್ಹ.
ಜನವರಿ 26ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಫ್ಜಲ್ ಗುರು ಕೋರಿದ್ದ ಗಲ್ಲು ರದ್ದು ಕೋರಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.
2004ರಲ್ಲಿ ಸುದೀರ್ಘ ವಿಚಾರಣೆಯ ನಂತರ ಸುಪ್ರೀಂಕೋರ್ಟ್ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಕಾಯಂ ಮಾಡಿತ್ತು.