ತ.ನಾಡಿಗೆ ನೀರು: KRSನತ್ತ ಯಡಿಯೂರಪ್ಪ ದೌಡು
ಪಾದಯಾತ್ರೆ ಮೊಟಕು, ಅಣೆಕಟ್ಟೆಗೆ ಮುತ್ತಿಗೆ: ಇದೀಗ ಯಡಿಯೂರಪ್ಪ ಪಾದಯಾತ್ರೆ ಮೊಟಕುಗೊಳಿಸಿ, KRS ಅಣೆಕಟ್ಟೆಯತ್ತ ಹೆಜ್ಜೆಹಾಕಿದ್ದಾರೆ. ಸಿಎಂ ಶೆಟ್ಟರ್ ನೀರು ಬಿಡುತ್ತಿರುವುದನ್ನು ವಿರೋಧಿಸಿ, ಅಣೆಕಟ್ಟೆಗೆ ಮುತ್ತಿಗೆ ಹಾಕುವುದಾಗಿ ಬಿಎಸ್ ವೈ ಘೋಷಿಸಿದ್ದಾರೆ. ಡ್ಯಾಂ ಬಳಿ ಈಗಾಗಲೇ ಅನೇಕ ರೈತರು ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
'ಲಜ್ಜೆಗೆಟ್ಟ ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ. ಕಾವೇರಿ ರೈತರ ಹಿತರಕ್ಷಣೆ ಕಾಯುವಲ್ಲಿ ಎಡವಿದ್ದಾರೆ. ಒಂದು ಕ್ಷಣವೂ ಶೆಟ್ಟರಿಗೆ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯತೆಯಿಲ್ಲ' ಎಂದು ಯಡಿಯೂರಪ್ಪ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
'ಯಾವುದೇ ಕಾರಣಕ್ಕೂ ನೀರು ಬಿಡೋಲ್ಲ ಅಂದವರು ಈಗ ನಾರಿಮನ್ ಹೆಸರು ಹೇಳಿ ನೀರು ಬಿಡುತ್ತಿದ್ದಾರೆ. ಮುಂದೆಯೂ ಅಷ್ಟೇ ಕಾವೇರಿ ನ್ಯಾಯ ಮಂಡಳಿ ಐತೀರ್ಪು ಅಧಿಸೂಚನೆ ಪ್ರಕಟವಾದರೆ ಅದನ್ನು ಸ್ವಾಗತಿಸುತ್ತಾರೆ. ಒಟ್ಟಿನಲ್ಲಿ ಇವರಿಂದ ಕಾವೇರಿ ರೈತರ ಹಿತರಕ್ಷಣೆ ಸಾಧ್ಯವಿಲ್ಲ' ಎಂದು ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದಿನಿಂದಲೇ ಜಾರಿಗೆ ಬರುವಂತೆ ಮುಂದಿನ ಒಂದು ವಾರದಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ಒಟ್ಟು 2.44 ಟಿಎಂಸಿ ನೀರು ಬಿಡುವುದಾಗಿ ಹುಬ್ಬಳ್ಳಿಯಲ್ಲಿ ಸಿಎಂ ಶೆಟ್ಟರ್ ಇಂದು ಬೆಳಗ್ಗೆ ಪ್ರಕಟಿಸುತ್ತಿದ್ದಂತೆ ಯಡಿಯೂರಪ್ಪ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಸಿಂಗ್ ವಿರುದ್ಧ ಯಡಿಯೂರಪ್ಪ ಕಿಡಿಕಿಡಿ: ಅಧಿಕಾರಿಗಳ ಮೂಲಕ ತಮಿಳುನಾಡಿಗೆ ನೆರವಾಗುವ ಹಾಗೆ (ರಾಜ್ಯದಿಂದ 2.44 ಟಿಎಂಸಿ ನೀರು ಬಿಡುವಂತೆ) ವರದಿ ತರಿಸಿಕೊಳ್ಳುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ತಮಿಳುನಾಡಿನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ ಶುಕ್ರವಾರ ಮಂಡ್ಯದಲ್ಲಿ ಟೀಕಿಸಿದ್ದರು.
ಕರ್ನಾಟಕದ ಜಲಾಶಯಗಳಲ್ಲಿ ಕುಡಿಯಲೂ ನೀರಿಲ್ಲ. ಇಂತಹ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳದೆ ತಮಿಳುನಾಡಿಗೆ ನೀರು ಬಿಡುವಂತಹ ವಾತಾವರಣ ಸೃಷ್ಟಿಸುವ ಮೂಲಕ ಪ್ರಧಾನಿ ಸಿಂಗ್ ಅವರು ಒಕ್ಕೂಟ ವ್ಯವಸ್ಥೆಗೆ ಅಪಚಾರವೆಸಗಿದ್ದಾರೆ ಎಂದೂ ಅವರು ತರಾಟೆಗೆ ತೆಗೆದುಕೊಂಡರು.
'ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟೆ ಕಟ್ಟಿಸಿರುವುದು ನೀರು ಸಂಗ್ರಹಣೆ ಮಾಡಿ ತಮಿಳುನಾಡಿಗೆ ಕೊಡಲು ಅಲ್ಲ. ಕರ್ನಾಟದವರು ನೀರಗಂಟಿ ಕೆಲಸ ಮಾಡಕ್ಕಲ್ಲ. ಕುಡಿಯಲೂ ನೀರಿಲ್ಲದಾಗ ತಮಿಳುನಾಡಿಗೆ ನೀರು ಎಲ್ಲಿಂದ ತರುವುದು' ಎಂದು ಯಡಿಯೂರಪ್ಪ ನಿನ್ನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.