ಪಕ್ಷಾಂತರಿಗಳು ಸಾರ್ ಇವರು ಪಕ್ಷಾಂತರಿ ಸಚಿವರುಗಳು..!
2008ರಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದ ಬಿಜೆಪಿಗೆ ಸಿಂಪಲ್ ಮೆಜಾರಿಟಿ ಸಾಬೀತು ಪಡಿಸಲು ಬೇಕಾಗಿದ್ದು 113, ಗೆದ್ದಿದ್ದು 110 ಕ್ಷೇತ್ರ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ಕಂಡುಕೊಂಡ ದಾರಿ 'ಆಪರೇಶನ್ ಕಮಲ'.
ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಒಳಗಾದ ಈ ಆಪರೇಶನ್ ಕಮಲಕ್ಕೆ ಮೊದಲಿಗೆ ಆರು ಜನ ಪಕ್ಷೇತರರ ಬೆಂಬಲ ಬಿಜೆಪಿಗೆ ಸಲೀಸಾಗಿ ಬಂತು. ಇದರಲ್ಲಿ ಸದ್ಯ ವರ್ತೂರು ಪ್ರಕಾಶ್ ಬಿಟ್ಟರೆ ಉಳಿದವರೆಲ್ಲಾ ಅಧಿಕಾರದ ರುಚಿ ಅನುಭಸಿದ್ದೂ ಆಯಿತು, ಬಿಜೆಪಿಯಿಂದ ದೂರವಾಗಿದ್ದೂ ಆಯಿತು. ಅದಕ್ಕೆ ಕಾರಣ ಹತ್ತು..ಹಲವಾರು..
ಇಷ್ಟಕ್ಕೂ ಸುಮ್ಮನಾಗದ ಬಿಜೆಪಿ ನಂತರದ ದಿನಗಳಲ್ಲಿ (ಪಕ್ಷದೊಳಗೆ ಭಿನ್ನಮತೀಯ ಚಟುವಟಿಕೆ ಎದುರಾದ ನಂತರ) ಎರಡನೇ ಸುತ್ತಿನ ಆಪರೇಶನ್ ಕಮಲಕ್ಕೆ ಮುಂದಾಯಿತು. ಈ ಬಾರಿ ನೇರ ಜೆಡಿಎಸ್ ಮತ್ತು ಕಾಂಗ್ರೆಸ್ ಬುಡಕ್ಕೇ ಕೈಹಾಕಿದ ಬಿಜೆಪಿ ಎರಡೂ ಪಕ್ಷದ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಕೈಹಾಕಿತು.
ಪರಿಣಾಮ ಈ ಎರಡು ಪಕ್ಷಗಳಿಂದ ಮತ್ತಷ್ಟು ಶಾಸಕರು ಬಿಜೆಪಿಗೆ ಜೈ ಅಂದರು. ಆಡಳಿತ ಪಕ್ಷದಲ್ಲಿದ್ದರೆ ಕ್ಷೇತ್ರಾಭಿವೃದ್ದಿಗಾಗಿ ಹೆಚ್ಚಿನ ಅನುದಾನ ಪಡೆಯಬಹುದು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬಿಜೆಪಿಗೆ ಸೇರಿದೆವು ಎನ್ನುವ ಪಕ್ಷಾಂತರ ಮಾಡಿದ ಶಾಸಕರ ನಡೆಯ ಹಿಂದೆ ಸಾಮಾಜಿಕ ಮತ್ತು ಆರ್ಥಿಕ ಕಾಳಜಿ ಇದ್ದಿರಬಹುದು, ಇಲ್ಲದಿರಲೂಬಹುದು. ಇರಲಿ..
ಬಿಜೆಪಿಗೆ ನಿಷ್ಟೆ ಮೆರೆದ ನಂತರ ಕ್ಷೇತ್ರದ ಅಭಿವೃದ್ದಿಯಲ್ಲಿ ಯಾವ "ಕ್ರಾಂತಿ" ತಂದರೋ ಅನ್ನೋದನ್ನಾ ಕ್ಷೇತ್ರದ ಮತದಾರರು ಬಲ್ಲರು. ಆಪರೇಶನ್ ಕಮಲದ ಮೂಲಕ ಬೇರೆ ಪಕ್ಷದಿಂದ ಬಿಜೆಪಿಗೆ ವಲಸೆ ಬಂದು ಈಗ ಸಚಿವರಾಗಿರುವವರು (ಪ್ರಮುಖ) ಯಾರೆಂದು ನಿಮಗೆ ತಿಳಿದಿದ್ದರೂ ಚುನಾವಣೆಯ ಈ ಹೊಸ್ತಿಲಿನಲ್ಲಿ ಮತ್ತೊಮ್ಮೆ ನಿಮ್ಮ ಗಮನಕ್ಕೆ.
(ಇದರಲ್ಲಿ ವರ್ತೂರು ಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿಯೇ ಮುಂದುವರಿದಿದ್ದಾರೆ. ಮರುಚುನಾವಣೆಯಲ್ಲಿ ಸೋಮಣ್ಣ ಪರಾಭವಗೊಂಡ ನಂತರ ಎಂಎಲ್ಸಿಯಾಗಿ ಆಯ್ಕೆಯಾಗಿದ್ದಾರೆ. ಮಿಕ್ಕೆಲ್ಲರೂ ಮರುಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಈ ಪಟ್ಟಿಯ ಹೊರತಾಗಿಯೂ ಬೇರೆ ಪಕ್ಷದಿಂದ ಬಿಜೆಪಿಗೆ ವಲಸೆ ಬಂದ ಪಟ್ಟಿಗಳು ಇನ್ನೂ ಇವೆ. ಉ.ದಾ ಜೆಡಿಎಸ್ ನಿಂದ ಬಂದ ಬಚ್ಚೇಗೌಡ, ಜೆಡಿಯುನಿಂದ ಬಂದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ)
ಉಮೇಶ್ ವಿಶ್ವನಾಥ್ ಕತ್ತಿ (ಕೃಷಿ ಸಚಿವ)
2008ರಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟಿನಲ್ಲಿ ಜಯಗಳಿಸಿದ್ದ ಉಮೇಶ್ ಕತ್ತಿ ಪಾರ್ಟಿ ಬದಲಾಯಿಸುವುದರಲ್ಲಿ ನಿಸ್ಸೀಮರು. ಬಿಜೆಪಿಗೆ ಸೇರಿದ ನಂತರ ಯಡಿಯೂರಪ್ಪ ಆಪ್ತವಲಯದಲ್ಲಿ ಕಾಣಿಸಿಕೊಂಡ ಕತ್ತಿ ಚುನಾವಣೆಯ ಈ ಸಮಯದಲ್ಲಿ ಬಿಜೆಪಿಯಲ್ಲಿರುತ್ತಾರೋ ಅಥವಾ ಬೇರೆ ಪಕ್ಷಕ್ಕೆ ಸೇರುತ್ತಾರೋ ಎನ್ನುವ ಪ್ರಶ್ನೆಗೆ ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಕೆಜೆಪಿ ಸೇರಬಹುದು ಎನ್ನುವುದು.
ಬಾಲಚಂದ್ರ ಜಾರಕಿಹೊಳಿ (ಪೌರಾಡಳಿತ ಸಚಿವ)
ಅರಭಾವಿ ಕ್ಷೇತ್ರದಲ್ಲಿ 2008ರಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದಿದ್ದ ಜಾರಕಿಹೊಳಿ ಯಡಿಯೂರಪ್ಪ ವಿರೋಧಿ ಬಣದಲ್ಲಿ ಕಾಣಿಸಿಕೊಂಡವರು. ಸದಾನಂದ ಗೌಡರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾಗ ಗೌಡರ ಪರ ದೆಹಲಿಯಲ್ಲಿ ಲಾಭಿ ನಡೆಸಿದ್ದರು. ಸದ್ಯ ಶೆಟ್ಟರ್ ಸರಕಾರಕ್ಕೆ ಅಖಂಡ ನಿಷ್ಟೆ ತೋರಿರುವ ಇವರ ಸದ್ಯದ ರಾಜಕೀಯ ನಡೆ ಗಮನಿಸಿದರೆ ಬಿಜೆಪಿಯಲ್ಲೇ ಮುಂದುವರಿಯಬಹುದು.
ಆನಂದ್ ಅಸ್ನೋಟಿಕರ್ (ಮೀನುಗಾರಿಕಾ ಸಚಿವ)
ಕಾರವಾರದ ಕ್ಷೇತ್ರದಲ್ಲಿ 2008ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದ ಆನಂದ್ ಅಸ್ನೋಟಿಕರ್ ಜನಾರ್ಧನ ರೆಡ್ಡಿ ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡವರು. ಬಿಜೆಪಿಯಲ್ಲಿ ಇವರಿಗೆ ಏನೋ ಅಸಮಧಾನವಿದ್ದಂತಿದ್ದು, ಕಾಂಗ್ರೆಸ್ ಟಿಕೆಟಿಗೆ ಲಾಬಿ ನಡೆಸುತ್ತಿದ್ದಾರೆನ್ನುವ ಸುದ್ದಿ ಸಮುದ್ರದ ಅಲೆಯಂತೆ ಉಕ್ಕೇರುತ್ತಾ ಬರುತ್ತಿದೆ.
ಸಿ ಪಿ ಯೋಗೀಶ್ವರ್ (ಪರಿಸರ, ಅರಣ್ಯ ಸಚಿವ)
ಚನ್ನಪಟ್ಟಣ ಕ್ಷೇತ್ರದಲ್ಲಿ 2008ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದ ಯೋಗೀಶ್ವರ್, ಪ್ರಭಾವಿ ಖಾತೆ ನೀಡಬೇಕೆಂದು ಲಾಭಿ ನಡೆಸುತ್ತಲೇ ಬಂದವರು. ಮೂಲಗಳ ಪ್ರಕಾರ ಮುಂದಿನ ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.
ವಿ ಸೋಮಣ್ಣ (ವಸತಿ ಸಚಿವ)
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೋವಿಂದರಾಜನಗರ ಕ್ಷೇತ್ರದಿಂದ ಗೆದ್ದಿದ್ದರು. ಒಂದು ಕಾಲದಲ್ಲಿ ದೇವೇಗೌಡ ಶಿಷ್ಯ ಬಣದಲ್ಲಿ ಕಾಣಿಸಿಕೊಂಡಿದ್ದ ಸೋಮಣ್ಣ, ನಂತರ ಕಾಂಗ್ರೆಸ್ ಮತ್ತು ಈಗ ಬಿಜೆಪಿ ಪಕ್ಷದಲ್ಲಿದ್ದಾರೆ. ಬಿಜೆಪಿಯಲ್ಲೇ ಇರುತ್ತಾರೋ, ಕಾಂಗ್ರೆಸ್ ಸೇರುತ್ತಾರೋ ಅಥವ ರಾಜಕೀಯ ನಿವೃತ್ತಿ ಹೊಂದುತ್ತಾರೋ ಎನ್ನುವುದರ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧರಿಸುತ್ತಾರೆಂದು ಹೇಳಿದ್ದರು.
ವರ್ತೂರು ಪ್ರಕಾಶ್ (ಜವಳಿ ಸಚಿವ)
ಕೋಲಾರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ವರ್ತೂರು ಪ್ರಕಾಶ್ ಮೊದಲನೇ ಹಂತದ ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ನಿಷ್ಟರಾದರು. ಶ್ರೀರಾಮುಲು ಪಕ್ಷದ ಕಡೆಗೆ ವಾಲುತ್ತಿರುವ ವರ್ತೂರು ತಮ್ಮದೇ ಸಮುದಾಯದ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗ ಬೇಕೆಂದು ಹೇಳಿಕೆ ನೀಡಿ ತನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಅಸ್ಪಷ್ಟತೆ ಮುಂದುವರಿಸಿದ್ದಾರೆ.