ಖೇಣಿಗೆ ಹಲ್ಲೆ: ದೇವೇಗೌಡರ ವಿರುದ್ಧ ತನಿಖೆ
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಅವರ ಬೆಂಬಲಿಗರ ವಿರುದ್ಧ ತನಿಖೆ ನಡೆಸುವಂತೆ 3ನೇ ಎಸಿಎಂಎಂ ನ್ಯಾಯಾಲಯ ಕೆಂಗೇರಿ ಪೊಲೀಸರಿಗೆ ಬುಧವಾರ (ಫೆ.6) ಆದೇಶ ನೀಡಿದೆ.
ಫೆಬ್ರವರಿ 2 ರಂದು ಅಶೋಕ್ ಖೇಣಿ ನೀಡಿದ ದೂರಿನ್ನು ಬುಧವಾರ ವಿಚಾರಣೆ ನಡೆಸಿತ್ತು. ಈ ವೇಳೆ ಹಲ್ಲೆ ನಡೆದ ಸಂಬಂಧ ದೂರು ದಾಖಲಾಗಿದ್ದರೂ, ತನಿಖೆ ಕೈಗೊಳ್ಳದ ಪೊಲೀಸರ ಕ್ರಮಕ್ಕೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ವಕೀಲ ಎ.ಪಿ. ರಂಗನಾಥ, ಬೆಂಬಲಿಗರಾದ ಎಚ್.ಎನ್. ಕೃಷ್ಣ, ಟಿ.ವೆಂಕಟೇಶ್ ಸೇರಿದಂತೆ ಇತರರ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.
ಆದಿಚುಂಚನಗಿರಿ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಜ.14ರಂದು ದೈವಾಧೀನರಾಗಿದ್ದರು. ಸ್ವಾಮೀಜಿಗೆ ಸಂತಾಪ ಸೂಚಿಸಲು ಅಶೋಕ್ ಖೇಣಿ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ ವೇಳೆ ದೇವೇಗೌಡ ಕುರಿತು ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡಿದರು ಎಂಬ ಆರೋಪದ ಮೇಲೆ ಖೇಣಿ ಮೇಲೆ ಕೆಲವರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಖೇಣಿ, ದೇವೇಗೌಡ ಮತ್ತವರ ಬೆಂಬಲಿಗರ ವಿರುದ್ಧ ಜ.16ರಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದರು.
ಜೆಡಿಎಸ್ ವರಿಷ್ಠ, ಒಕ್ಕಲಿಗ ಸಮುದಾಯದ ಪ್ರಮುಖ ನೇತಾರ ದೇವೇಗೌಡರ ಬಗ್ಗೆ ಅಶೋಕ್ ಖೇಣಿ ನೀಡಿರುವ ಹೇಳಿಕೆ ಹಿಂಪಡೆದು, ಬೇಷರತ್ ಕ್ಷಮೆಯಾಚಿಸುವಂತೆ ಒಕ್ಕಲಿಗರ ಜಾಗೃತ ವೇದಿಕೆ ಆಗ್ರಹಿಸಿದೆ.
ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ತೆರಳಿದ್ದಾಗ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಖೇಣಿ ಅವರ ಬೇಸರದಿಂದ ತೃಪ್ತರಾಗದ ಒಕ್ಕಲಿಗ ಸಮುದಾಯ, ಖೇಣಿ ಅವರ ಕ್ಷಮೆ ಬಯಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಒಕ್ಕಲಿಗರ ವೇದಿಕೆ ಅಧ್ಯಕ್ಷ ಕೆ.ಸಿ ಗಂಗಾಧರ್ ಹಾಗೂ ಕಾರ್ಯದರ್ಶಿ ತಮ್ಮಣ್ಣ ಗೌಡ, ಹಿರಿಯ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ಇನ್ನು ಮುಂದೆ ದೇವೇಗೌಡರ ವಿರುದ್ಧ ಹೇಳಿಕೆ ನೀಡಿದರೆ ನಿಮಗೆ ಬೀದರ್ ಕಡೆಗೆ ದಾರಿ ತೋರಿಸಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಸಿದರು.
ಬಾಲಗಂಗಾಧರನಾಥ ಸ್ವಾಮೀಜಿಗಳ ಪಾರ್ಥೀವ ಶರೀರ ದರ್ಶನಾರ್ಥಿಯಾಗಿ ಬಂದಿದ್ದ ಅಶೋಕ್ ಖೇಣಿ ಅವರು, ದೇವೇಗೌಡರು ರಾಜಕೀಯ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ರೀತಿ ಹೇಳಿಕೆ ನೀಡುವ ಅಗತ್ಯ ಏನಿತ್ತು. ಯಾವ ಉದ್ದೇಶದಿಂದ ಈ ರೀತಿ ಮಾತನಾಡಿದಿರಿ ಎಂದು ವೇದಿಕೆ ಪ್ರಶ್ನಿಸಿದೆ.
'ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ತೆರಳಿದ್ದಾಗ ಯಾರ ವಿರುದ್ಧವೂ ನಾನು ಏನನ್ನೂ ಆರೋಪಿಸಲಿಲ್ಲ. ಆದರೂ ತಪ್ಪು ತಿಳಿದ ಕೆಲವು ಯುವಕರು ನನ್ನನ್ನು ಸ್ಥಳದಿಂದ ತೊಲಗುವಂತೆ ಆಗ್ರಹಿಸಿ ಹಲ್ಲೆ ನಡೆಸಿದರು.