ಲೋಕಾಯುಕ್ತಕ್ಕೆ ಹೈ ತಾಕೀತು: ಭ್ರಷ್ಟರಿಗೆ ಊರುಗೋಲು
ಏನಪಾ ಅಂದರೆ ಇನ್ಮುಂದೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸದೆ, ಉನ್ನತಾಧಿಕಾರಿಗಳಿಗೆ ಪೂರ್ವ ಮಾಹಿತಿ ನೀಡದೆ ಬಿಲ್ಕುಲ್ ದಾಳಿ ನಡೆಸುವಂತಿಲ್ಲ ಎಂಬುದು ಹೈಕೋರ್ಟ್ ಆದೇಶದ ತಾತ್ಪರ್ಯ. ಆದರೆ ಆ ವೇಳೆಗೆ ಮಾಹಿತಿ ಸೋರಿಕೆಯಾಗಿ ಭ್ರಷ್ಟರು ಲೋಕಾ ಬಲೆಯಿಂದ ನುಣುಚಿಕೊಂಡರೆ... ಎಂಬ ಆತಂಕ ಎದುರಾಗಿದೆ.
ಲೋಕಾಯುಕ್ತ ದಾಳಿಗೊಳಗಾಗಿದ್ದ ಸಬ್ರಿಜಿಸ್ಟ್ರಾರ್ ಗಿರೀಶ್ ಚಂದ್ರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ರಾವ್ ಮತ್ತು ನ್ಯಾ. ಎಸ್ ಅಬ್ದಲ್ ನಜೀರ್ ಅವರಿದ್ದ ವಿಭಾಗೀಯಪೀಠವು ಈ ಮಹತ್ವದ ಆದೇಶ ನೀಡಿದೆ. ಇದು ಭ್ರಷ್ಟ ಅಧಿಕಾರಿಗಳಿಗೆ ಇದು ಊರುಗೋಲಾಗುವ ಸಾಧ್ಯತೆ ಹೆಚ್ಚಾಗಿದೆ.
ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಎಫ್ಐಆರ್ ದಾಖಲಿಸದೆ ಆರೋಪಿಗಳ ವಿರುದ್ಧ ದಾಳಿ ನಡೆಸುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ನಿಯಮ ಉಲ್ಲಂಘಿಸುವ ಲೋಕಾಯುಕ್ತ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಸೂಕ್ತ ತರಬೇತಿ ನೀಡುವಂತೆಯೂ ಲೋಕಾಯುಕ್ತ ಡಿಜಿಪಿಗೆ ಹೈಕೋರ್ಟ್ ಸೂಚನೆ ನೀಡಿದೆ.
'ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ'ಯಡಿ ದೂರು ಬಂದಾಗ, ಮೊದಲು ಆ ದೂರನ್ನು ಸ್ವೀಕರಿಸಿ ಪರಿಶೀಲನೆ ನಡೆಸಬೇಕು. ದೂರಿನಲ್ಲಿ ಸತ್ಯಾಂಶವಿರುವುದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಎಫ್ಐಆರ್ ದಾಖಲಿಸಬೇಕು. ನಂತರವೇ ಆರೋಪಿಗಳ ಮೇಲೆ ದಾಳಿ ನಡೆಸಬೇಕು. ಅದಕ್ಕೂ ಮೊದಲು, ಎಫ್ಐಆರ್ ದಾಖಲಿಸುತ್ತಿದ್ದಂತೆ ತನಿಖಾಧಿಕಾರಿಯು ತನ್ನ ಮೇಲಧಿಕಾರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಎಫ್ಐಆರ್ ದಾಖಲಿಸದೆ ದಾಳಿ ನಡೆಸುವುದು ಸರಿಯಲ್ಲ. ಆ ರೀತಿ ಮಾಡುವುದು ಮೂರ್ಖತನ' ಎಂದು ಹೈಕೋರ್ಟ್ ಆದೇಶಿಸಿದೆ.