ಬಜೆಟ್ ಗೆ ಬಿಎಸ್ವೈ ಅವಕಾಶ:ರಹಸ್ಯ ಕಂಡುಕೊಂಡ ಜೆಡಿಎಸ್
ಬಜೆಟ್ ಮಂಡನೆ ವಿಚಾರದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪನವರ ನಡುವೆ ಒಳ ಒಪ್ಪಂದ ನಡೆದಿದೆ ಎಂದು ಜೆಡಿಎಸ್ ಮುಖಂಡ ಬಸವರಾಜ್ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಯಡಿಯೂರಪ್ಪ ಆಪ್ತರಾದ ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ರೇಣುಕಾಚಾರ್ಯ ಒಳ್ಳೆ ಆದಾಯವಿರುವ ಪ್ರಭಾವಿ ಖಾತೆಯನ್ನು ಹೊಂದಿದ್ದಾರೆ.
ಆ ಮೂಲಕ ಬಂದಷ್ಟು ಬರಲಿ ಎಂದು ಚುನಾವಣೆ ಖರ್ಚಿಗೆ ಕೊನೆಯವರೆಗೂ ದೋಚಿಕೊಂಡು ಹೋಗುವ ಉದ್ದೇಶದಿಂದ ಯಡಿಯೂರಪ್ಪ ಬಜೆಟ್ ಮಂಡಿಸಲು ಅವಕಾಶ ನೀಡುತ್ತಿದ್ದಾರೆಂದು ಯತ್ನಾಳ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಯತ್ನಾಳ್, ಕೆಜೆಪಿ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಇವರಿಗೆ ಜನಸೇವೆ ಮಾಡುವ ಉದ್ದೇಶವಿಲ್ಲ, ಹೇಗೆ ಸರಕಾರದ ಬೊಕ್ಕಸವನ್ನು ಲೂಟಿ ಮಾಡುವುದು ಅನ್ನುವುದಷ್ಟೆ ಚಿಂತೆ. ಇಂಥವರಿಂದ ನಮ್ಮ ರಾಜ್ಯ ಉದ್ದಾರವಾಗುವುದಿಲ್ಲ.
ನನ್ನನ್ನೂ ಸೇರಿ ಲಿಂಗಾಯಿತ ಮುಖಂಡರಾದ ಶಿವಪ್ಪ, ಬಸವರಾಜ ಪಾಟೀಲ್ ಸೇಡಂ ಮುಂತಾದವರನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಮೂಲೆಗುಂಪು ಮಾಡಿದರು. ಕೆಲಸಕ್ಕೆ ಬಾರದವರನ್ನು ರಾಜಕೀಯವಾಗಿ ಮೇಲಕ್ಕೆ ತಂದರು ಎಂದು ಯತ್ನಾಳ್ ಆರೋಪಿಸಿದ್ದಾರೆ.
ರಾಜ್ಯವನ್ನು ಯಡಿಯೂರಪ್ಪ ಲೂಟಿ ಹೊಡೆಯುತ್ತಿದ್ದರೂ ಮಠಾಧೀಶ ಅವರ ಬೆಂಬಲಕ್ಕೆ ನಿಂತರು. ಇನ್ನಾದರೂ ಮಠಾಧೀಶರು ಆತ್ಮಾವಲೋಕನ ಮಾಡಿಕೂಳ್ಳಲಿ.
ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಇಬ್ಬರೂ ಸೇರಿ ಲಿಂಗಾಯತ ಸಮುದಾಯದ ಮಾರ್ಯದೆ ತೆಗೆಯುತ್ತಿದ್ದಾರೆ ಎಂದು ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.