ಪ್ರದರ್ಶನಕ್ಕಿದ್ದ ನಗ್ನ ವರ್ಣಚಿತ್ರಗಳಿಗೆ ಗೇಟ್ ಪಾಸ್
ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಲಾಗಿದ್ದು, ಹಿಂದೂ ಭಾವನೆಗಳಿಗೆ ಆ ಚಿತ್ರಗಳು ಧಕ್ಕೆ ತಂದಿವೆ ಎಂದು ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಆ ಚಿತ್ರಗಳನ್ನು ಚಿತ್ರಕಲಾ ಪ್ರದರ್ಶನದಿಂದ ತೆಗೆಸಿದ್ದಾರೆ.
ದೆಹಲಿಯ ಅನಿರುದ್ಧ್ ಸಾಯಿನಾಥ ಕೃಷ್ಣಮಣಿ ಎಂಬ ಕಲಾವಿದ ಬರೆದಿರುವ ಒಂದು ಚಿತ್ರದಲ್ಲಿ ನಗ್ನವಾಗಿರುವ ಶಿವ ಮತ್ತು ಮೇಲುಡುಪು ಧರಿಸದಿರುವ ಪಾರ್ವತಿ ಒಬ್ಬರನ್ನೊಬ್ಬರು ತುಟಿತುಟಿಗೆ ಚುಂಬಿಸುತ್ತಿದ್ದಾರೆ. ಮತ್ತೊಂದು ಚಿತ್ರದಲ್ಲಿ ಕಾಳಿ ದೇವಿಯನ್ನು ನಗ್ನವಾಗಿ ಚಿತ್ರಿಸಲಾಗಿದೆ. ಖಜುರಾಹೋ ಶಿಲ್ಪಕಲೆಗಳಿಂದ ಪ್ರೇರೇಪಿತರಾಗಿ ಈ ಚಿತ್ರಗಳನ್ನು ಬರೆದಿರುವುದಾಗಿ ಅನಿರುದ್ಧ್ ಹೇಳಿದ್ದಾರೆ.
ಈ ಚಿತ್ರಗಳ ಪ್ರದರ್ಶನ ಮುಂದುವರಿದರೆ ಹಿಂದೂಗಳ ಭಾವನೆ ಕೆರಳಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಬಹುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಅನಿರುದ್ಧ್ ಚಿತ್ರಿಸಿರುವ ಈ ಚಿತ್ರಗಳನ್ನು ಪ್ರದರ್ಶನದಿಂದ ತೆಗೆಯಲಾಗಿದೆ ಎಂದು ಚಿತ್ರಕಲಾ ಪರಿಷತ್ತಿನ ಮುಖ್ಯ ಆಡಳಿತಾಧಿಕಾರಿ ಶ್ರೀಧರ್ ಅವರು ಹೇಳಿದ್ದಾರೆ.
ಯುವ ಉದಯೋನ್ಮುಖ ಕಲಾವಿದರಿಗೆ ಅವರ ಕಲೆಯನ್ನು ಪ್ರದರ್ಶಿಸಲು ಚಿತ್ರಕಲಾ ಪರಿಷತ್ ಅವಕಾಶ ಮಾಡಿಕೊಡುತ್ತದೆ. ಈ ಬಾರಿ 40ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಕ್ಕಿದ್ದವು. ಈ ಪ್ರದರ್ಶನವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಉದ್ಘಾಟಿಸಿದ್ದರು.
ಈ ಅಶ್ಲೀಲ ಚಿತ್ರಗಳನ್ನು ತೆಗೆಯದಿದ್ದರೆ ಚಿತ್ರಕಲಾ ಪರಿಷತ್ತಿನ ಎದುರುಗಡೆ ಪ್ರತಿಭಟನೆ ನಡೆಸುವುದಾಗಿ ಹಲವರು ಕರೆ ಮಾಡಿ ಹೇಳಿದ್ದರು. ಇದು ಕಲಾವಿದನ ಮೂಲಭೂತ ಸ್ವಾತಂತ್ರ್ಯ ಎಂದು ಹೇಳುವ ಕೆಲ ಕಲಾವಿದರು, ಇಂಥ ಚಿತ್ರಗಳನ್ನು ಪ್ರತಿಭಟಿಸುತ್ತಿರುವುದು ಸಾಂಸ್ಕೃತಿಕ ಭಯೋತ್ಪಾದನೆ ಎಂದು ಬಣ್ಣಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಹಿಂದೂ ದೇವತೆಗಳಾದ ಸರಸ್ವತಿ, ಭಾರತಮಾತೆ ಮುಂತಾದ ದೇವತೆಗಳನ್ನು ನಗ್ನವಾಗಿ ಚಿತ್ರೀಕರಿಸಿದ್ದಕ್ಕೆ, ಚಿತ್ರನಟಿ ಮಾಧುರಿ ಸೌಂದರ್ಯಕ್ಕೆ ಫಿದಾ ಆಗಿದ್ದ ಖ್ಯಾತ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ಅವರನ್ನು ಬಹಿಷ್ಕರಿಸಲಾಗಿತ್ತು. ಅವರ ವಿರುದ್ಧ ಕೇಸ್ ದಾಖಲಾಗಿ, ಬಂಧಿಸಲು ವಾರಂಟ್ ಕೂಡ ನೀಡಲಾಗಿತ್ತು. ಅವರು 2006ರಲ್ಲಿ ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿ ಅಲ್ಲೇ ಅಸುನೀಗಿದರು.