ಬೆಂಗಳೂರು ಅಭಿವೃದ್ಧಿಗೆ ಟೊಂಕಕಟ್ಟಿದ ಬಿಪ್ಯಾಕ್
ಬೆಂಗಳೂರು, ಫೆ. 5 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿರುವಾಗ 'ಅರ್ಹ' ಅಭ್ಯರ್ಥಿಗೆ ಹಣಕಾಸು ನೆರವನ್ನು ಒದಗಿಸುವ ಮತ್ತು ಬೆಂಗಳೂರಿನ ಚಿತ್ರಣವನ್ನು ಬದಲಿಸುವ ಮೂಲ ಉದ್ದೇಶದಿಂದ ಬೆಂಗಳೂರಿನ ಬಗ್ಗೆ ಚಿಂತಿಸುತ್ತಿರುವ ಪ್ರಭಾವಿ ವ್ಯಕ್ತಿಗಳು ಬೆಂಗಳೂರು ಪಾಲಿಟಿಕಲ್ ಆಕ್ಷನ್ ಕಮಿಟಿ (ಬಿಪಿಎಸಿ) ಎಂಬ ರಾಜಕೀಯ ಪಕ್ಷಗಳಿಗೆ ಪರ್ಯಾಯವಾದ ಶಕ್ತಿಯನ್ನು ಹುಟ್ಟುಹಾಕಿದ್ದಾರೆ.
ನಿವೃತ್ತ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ, ಬಯೋಕಾನ್ ಚೀಫ್ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ. ಮೋಹನದಾಸ್ ಪೈ, ಲೋಕಸತ್ತಾ ಪಕ್ಷದ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್ ಸೇರಿ ಹಲವಾರು ಪ್ರಮುಖ ವ್ಯಕ್ತಿಗಳು ಈ ಸಂಸ್ಥೆಯ ಆಧಾರಸ್ತಂಭವಾಗಿದ್ದಾರೆ. ತಮ್ತಮ್ಮ ಕ್ಷೇತ್ರಗಳಲ್ಲಿ ಇವರು ದೊರೆಗಳಾಗಿದ್ದರೆ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ಲೋಕಾಯುಕ್ತಕ್ಕೆ ಮುಖ್ಯಸ್ಥನನ್ನು ಸರಕಾರದಿಂದ ಇನ್ನೂ ನೇಮಿಸಲಾಗಿಲ್ಲ, ಬಿಎಂಟಿಎಫ್ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ, ಬಿಬಿಎಂಪಿಯಿಂದ ಕಸ ವಿಲೇವಾರಿಯಂಥ ಸಮಸ್ಯೆಯನ್ನು ಬಗೆಹರಿಸಲಾಗುತ್ತಿಲ್ಲ, ಚುನಾವಣೆ ಮಂತ್ರ ಜಪಿಸುತ್ತಿರುವ ಸರಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಇಂಥ ಸ್ಥಿತಿಯಲ್ಲಿ ದಿಕ್ಕೆಟ್ಟಿರುವ ಬೆಂಗಳೂರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಉದ್ದೇಶದಿಂದ ಬಿಪಿಎಸಿ ಅಥವಾ ಬಿಪ್ಯಾಕ್ ಹುಟ್ಟಿಕೊಂಡಿದೆ.
ಭಾನುವಾರ ಸಭೆ ಸೇರಿದ್ದ ಈ ಮಹನೀಯರು, ಬೆಂಗಳೂರಿನಲ್ಲಿ ಸ್ಥಳೀಯ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಭ್ರಷ್ಟಾಚಾರ ವಿರೋಧಿ ಅಭ್ಯರ್ಥಿಗಳಿಗೆ ಹಣಕಾಸು ನೆರವು ಒದಗಿಸಬೇಕು ಎಂದು ನಿರ್ಣಯಿಸಿದೆ. ಅಂತಹ ವ್ಯಕ್ತಿ ಗೆದ್ದು, ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಮತ್ತು ಬೆಂಗಳೂರಿನ ನಾಗರಿಕರ ನಿಜವಾದ ಪ್ರತಿನಿಧಿಯಾಗಿರಬೇಕು ಎಂಬುದು ಅವರ ಉದ್ದೇಶ.
"ಬೆಂಗಳೂರಿನಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ನಾಗರಿಕರು ದಿಕ್ಕೆಟ್ಟಿದ್ದಾರೆ. ಪಾರದರ್ಶಕತೆ ಮತ್ತು ಉತ್ತರದಾಯಿತ್ವವಂತೂ ಇಲ್ಲವೇ ಇಲ್ಲ. ಹೀಗಾಗಿ, ಸರಕಾರದಲ್ಲೇ ಇದ್ದುಕೊಂಡು ಆಡಳಿತ ಸರಿದಾರಿಯಲ್ಲಿ ನಡೆಯುವಂತೆ ಬಿಪಿಎಸಿ ಪರ್ಯಾಯ ಶಕ್ತಿಯಾಗಿರುತ್ತದೆ" ಎಂದು ಬಿಪಿಎಸಿಯ ಅಧ್ಯಕ್ಷೆಯಾಗಿರುವ ಕಿರಣ್ ಮಜುಂದಾರ್ ಷಾ ಅವರು ಹೇಳಿದ್ದಾರೆ.
ಬಿಪಿಸಿಎ ತಂಡ : ಕಿರಣ್ ಮಜುಂದಾರ್ ಷಾ, ಟಿ.ವಿ. ಮೋಹನದಾಸ್ ಪೈ, ಕೆ. ಜೈರಾಜ್, ಅಶ್ವಿನಿ ನಾಚಪ್ಪ, ಪ್ರಸಾದ್ ಬಿದ್ದಪ್ಪ, ಡಾ. ಅಶ್ವಿನ್ ಮಹೇಶ್, ಚಾರು ಶರ್ಮಾ, ಹರೀಶ್ ಬಿಜೂರ್, ಹರೀಶ್ ನರಸಪ್ಪ, ಕಲ್ಪನಾ ಕಾರ್, ನಿಶಾ ಮಿಲ್ಲೆಟ್, ನೂರೈನ್ ಫಜಲ್, ಪ್ರಕಾಶ್ ಬೆಳವಾಡಿ, ಪೃಥ್ವಿ ರೆಡ್ಡಿ, ಆರ್.ಕೆ. ಮಿಶ್ರಾ, ಸ್ಟಾನ್ಲಿ ಪಿಂಟೋ ಮತ್ತು ವಾಣಿ ಗಣಪತಿ.