ಫೆಬ್ರವರಿ 4ರಿಂದ ವಿಧಾನಸೌಧದ ಸುತ್ತ ನಿಷೇಧಾಜ್ಞೆ
ಅಷ್ಟೇ ಅಲ್ಲ ಸಿಡಿಮದ್ದು, ಸ್ಫೋಟಕಗಳನ್ನು ಸಿಡಿಸುವಂತಿಲ್ಲ, ಪ್ರತಿಕೃತಿ ಪ್ರದರ್ಶನ, ದಹನ, ಪ್ರಚೋದನಾತ್ಮಕ ಭಾಷಣ, ಭಿತ್ತಿಪತ್ರ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ. ಕಾರಣ ಫೆ.4ರಿಂದ ವಿಧಾನಮಂಡಲದ ಜಂಟಿ ಅಧಿವೇಷನ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ವಿಧಾನಸೌಧದ ಸುತ್ತಮುತ್ತ 2 ಕಿ.ಮೀವರೆಗೆ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ. ಫೆ.4ರ ಬೆಳಗ್ಗೆ 6ರಿಂದ ಈ ನಿಷೇಧಾಜ್ಞೆ ಜಾರಿಯಾಗಲಿದೆ. ಸಾರ್ವಜನಿಕ ರಜಾ ದಿನಗಳು ಹಾಗೂ ಅಧಿವೇಷನ ನಡೆಯದ ದಿನಗಳನ್ನು ಹೊರತುಪಡಿಸಿ ಫೆಬ್ರವರಿ 13ರ ಮಧ್ಯರಾತ್ರಿ 12ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಕೆಜೆಪಿ ಹಾಗೂ ಬಿಜೆಪಿ ನಡುವಿನ ಹಗ್ಗಜಗ್ಗಾಟ ಈ ಬಾರಿಯ ಅಧಿವೇಶನದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಕಾರ್ಮಿಕ ಮತ್ತು ವಿದ್ಯಾರ್ಥಿ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.