ಬೋಪಯ್ಯ ಮೇಲೆ ಬೇಳೂರು ಮಾತಿನ ಪ್ರಹಾರ
ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾಗಿದ್ದ 13 ಶಾಸಕರನ್ನು ಅನರ್ಹ ಮಾಡಬೇಕೆಂದು ನಾವು ಸ್ಪೀಕರ್ ಬೋಪಯ್ಯ ಅವರಿಗೆ ಮನವಿ ಮಾಡಿದ್ದೆವು. ಅದಕ್ಕೆ ಸೂಕ್ತವಾದ ದಾಖಲಾತಿಗಳನ್ನು ಕೂಡ ಒದಗಿಸಿದ್ದೆವು. ನಮ್ಮ ಮನವಿಗೆ ಅವರು ಸೊಪ್ಪು ಹಾಕಲಿಲ್ಲ. ಅಲ್ಲದೆ ಸೌಜನ್ಯಕ್ಕಾದರೂ ಅವರು ನಮ್ಮೊಂದಿಗೆ ಚರ್ಚಿಸಲಿಲ್ಲ. ಬದಲಾಗಿ, ಬೋಪಯ್ಯ ಅವರು ಭಿನ್ನಮತೀಯರ ರಾಜೀನಾಮೆ ಸ್ವೀಕರಿಸಿದರು ಎಂದು ಅವರು ದೂರಿದರು.
ಕೆಜೆಪಿ ಸೇರಿರುವ ಶಾಸಕರ ರಾಜೀನಾಮೆಯನ್ನು ಬೋಪಯ್ಯ ಸ್ವೀಕರಿಸಿದ್ದರಿಂದ ಬಿಜೆಪಿ ಅಲ್ಪಮತಕ್ಕೆ ಕುಸಿಯುವ ಅಪಾಯ ಎದುರಿಸುವಂತಾಗಿದೆ. ಸ್ಪೀಕರ್ ಅವರು ಯಾವುದೇ ಪಕ್ಷದ ಆಮಿಷಕ್ಕೆ ಒಳಗಾಗದೆ ಸ್ವತಂತ್ರ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಬೇಳೂರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಮ್ಮ ಆಕ್ರೋಶವನ್ನು ಯಡಿಯೂರಪ್ಪ ಅವರ ಮೇಲೆ ತಿರುಗಿಸಿದ ಬೇಳೂರು ಗೋಪಾಲಕೃಷ್ಣ ಅವರು, ರಾಜೀನಾಮೆ ಕೊಡಿಸುವುದೇ ಆಗಿದ್ದರೆ ಮೊದಲು ಅವರು ತಮ್ಮ ಮಗ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಂದ ರಾಜೀನಾಮೆ ಕೊಡಿಸಬೇಕಾಗಿತ್ತು. ಅದನ್ನೇಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಇನ್ನು ಮುಂದೆ ರಾಜ್ಯದಲ್ಲಿ ಯಡಿಯೂರಪ್ಪನವರ ಆಟ ನಡೆಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಅವರು ಕೂಡ ರಾಜೀನಾಮೆ ಸಲ್ಲಿಸಿದ್ದರಿಂದ ಸದನದಲ್ಲಿ ಬಿಜೆಪಿಯ ಸಂಖ್ಯಾಬಲ 119ರಿಂದ 105ಕ್ಕೆ ಕುಸಿದಿದೆ. ಈಗಾಗಲೆ 13 ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಿ ಕೆಜೆಪಿ ಸೇರಿಕೊಂಡಿದ್ದಾರೆ. ಬಹುಮತ ಸಾಬೀತುಪಡಿಸಲು ಬೇಕಾದ ಸಂಖ್ಯಾಬಲವನ್ನು ಬಿಜೆಪಿ ಸದ್ಯಕ್ಕೆ ಹೊಂದಿದ್ದರೂ ಇನ್ನಿಬ್ಬರು ರಾಜೀನಾಮೆ ನೀಡಿದರೆ ಮತ್ತು ಅವರ ರಾಜೀನಾಮೆ ಅಂಗೀಕಾರವಾದರೆ ಬಿಜೆಪಿ ಸರಕಾರ ಇಕ್ಕಟ್ಟಿಗೆ ಸಿಲುಕುವುದು ಖಚಿತ.