ಕಾಳಿಮಠದ ಋಷಿಕುಮಾರ ಸ್ವಾಮಿ ಮತ್ತೆ ಪ್ರತ್ಯಕ್ಷ!
ಬಿಡದಿ ನಿತ್ಯಾನಂದನ ವಿರುದ್ಧ ಸಮರವನ್ನು ಸಾರಿದ್ದ ಋಷಿಕುಮಾರ ಸ್ವಾಮಿ, ಸ್ಟಿಂಗ್ ಆಪರೇಷನ್ನಲ್ಲಿ ಸಿಲುಕಿಕೊಂಡು ಮಾನಮರ್ಯಾದೆ ಕಳೆದುಕೊಂಡ ನಂತರ, ತಾವು ತೊಟ್ಟಿದ್ದ ಪೇಟವನ್ನು ತ್ಯಜಿಸಿ ಭೂಗತರಾಗಿದ್ದರು. ಈಗ ಕಾಣಿಸಿಕೊಂಡಿರುವುದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಎಂಬ ಪ್ರದೇಶದಲ್ಲಿ.
ಮಹಾಕವಿ ಲಕ್ಷ್ಮೀಶ ಮತ್ತು ರುದ್ರಭಟ್ಟರ ಜನ್ಮಸ್ಥಳವಾದ ದೇವನೂರಿನಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಚಂಡಿಕಾ ಹೋಮ ಮುಂತಾದವುಗಳನ್ನು ಶನಿವಾರ ಹಮ್ಮಿಕೊಂಡಿದ್ದಾರೆ. ಈ ಎಲ್ಲ ಹೋಮ ಹವನಗಳನ್ನು ನೀರಗುಂಡಿಯಲ್ಲಿರುವ ಸುಕ್ಷೇತ್ರ ಕಾಳಿಕಾಶ್ರಮದಲ್ಲಿ ಲೋಕಕಲ್ಯಾಣಕ್ಕಾಗಿ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಈ ಸಮಾರಂಭದಲ್ಲಿ ಬೆಂಗಳೂರಿನಿಂದ ಬಂದಿರುವ ಅವರ ಕೆಲ ಭಕ್ತರು, ಅಭಿಮಾನಿಗಳು ಮಾತ್ರ ಭಾಗಿಯಾಗಿದ್ದಾರೆ. ಹೆಚ್ಚು ಪ್ರಚಾರ ಮಾಡದ ಕಾರಣ ಸ್ಥಳೀಯರಾರೂ ಭಾಗವಹಿಸಿಲ್ಲ ಎಂದಿದ್ದಾರೆ ಋಷಿಕುಮಾರ. ಈ ಹವನದಲ್ಲಿ ಅವರ ತಾಯಿ ಮತ್ತು ವಿಕಲಚೇತನ ಸಹೋದರ ಅವರೂ ಭಾಗವಹಿಸಿದ್ದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗಿದ್ದ ಸ್ಟಿಂಗ್ ಆಪರೇಷನ್ನಲ್ಲಿ, ನಿತ್ಯಾನಂದನ ವಿರುದ್ಧ ತಾವು ಮತ್ತು ಕನ್ನಡಪರ ಸಂಘಟನೆಗಳು ನಡೆಸುತ್ತಿದ್ದ ಹೋರಾಟವನ್ನು ಬಿಡಲು 10 ಕೋಟಿ ರು. ಮತ್ತು 28 ಲಕ್ಷ ರು. ಬೆಲೆಬಾಳುವ ಒಂದು ಫಾರ್ಚೂನರ್ ಕಾರನ್ನು ಅವರು ಕೇಳಿದ್ದು ಬಯಲಾಗಿತ್ತು.
ಈ ಘಟನೆ ನಡೆದ ನಂತರ ಋಷಿಕುಮಾರ ಸ್ವಾಮಿ ರಹಸ್ಯ ಸ್ಥಳಕ್ಕೆ ಪರಾರಿಯಾಗಿದ್ದರು. ಈ ಸಂಗತಿ ತಿಳಿಯುತ್ತಿದ್ದಂತೆ ಕೆಲ ಸಂಘಟನೆಗಳು ಅವರ ಆಶ್ರಮಕ್ಕೆ ಮತ್ತು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಗೃಹ ಸಚಿವ ಆರ್ ಅಶೋಕ್ ಅವರು ಕೂಡ, ಋಷಿಕುಮಾರ ಅವರ ಮೇಲಿರುವ ಆರೋಪ ಸಾಬೀತಾದರೆ ಕ್ರಮ ತೆಗೆದುಕೊಳ್ಳುವುದಾಗಿ ವಾಗ್ದಾನ ನೀಡಿದ್ದರು. ತಮ್ಮ ವಿರುದ್ಧ ಮಾಡಿದ್ದ ಆರೋಪಗಳು ಸುಳ್ಳೆಂದು ಸಾಬೀತಾದ ಮೇಲೆಯೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಾಗಿ ಕಾಳಿ ಸ್ವಾಮಿ ಹೇಳಿದ್ದರು.