ಈಶ್ವರಪ್ಪ ಮಹಾನ್ ಪೆದ್ದ, ನಿಮ್ ಮನೆ ಹಾಳಾಗ್ ಹೋಗ..!
ಉಳ್ಳಾಲದಿಂದ ಮಲ್ಪೆವರೆಗೆ ಆಯೋಜಿಸಲಾಗಿರುವ 'ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ' ಪಾದಯಾತ್ರೆಯ ಮೂರನೇ ದಿನವಾದ ಗುರುವಾರ (ಜ 31) ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಈಶ್ವರಪ್ಪನವರಿಗೆ ತಾಕತ್ತಿನ ಬಗ್ಗೆ ಮಾತನಾಡುವುದು ಶೋಭೆ ತರುವುದಿಲ್ಲ.
ಅವರಿಗೆ ಮತ್ತು ಅವರ ಪಕ್ಷಕ್ಕೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಜನತಾ ನ್ಯಾಯಾಲಯಕ್ಕೆ ಬಂದು ನ್ಯಾಯ ಕೇಳಲಿ ಎಂದು ಸವಾಲೆಸಿದಿದ್ದಾರೆ.
ಜಗದೀಶ್ ಶೆಟ್ಟರ್ ಸರಕಾರ ಕೋಮಾದಲ್ಲಿದೆ. ಯಾವ ಪುರುಷಾರ್ಥಕ್ಕಾಗಿ ಬಜೆಟ್ ಮಂಡಿಸುತ್ತಾರೋ ದೇವರೇ ಬಲ್ಲ. ಜನರಿಗೆ ಕುಡಿಯಲು ನೀರಿಲ್ಲ, ದನಕರುಗಳಿಗೆ ಮೇವಿಲ್ಲ.
ಬೊಕ್ಕಸದಲ್ಲಿ ದುಡ್ಡಿಲ್ಲ, ನಿಮ್ ಮನೆ ಹಾಳಾಗಿ ಹೋಗ ಬಜೆಟ್ ಮಂಡಿಸ್ತಾರಂತೆ.. ಬಜೆಟ್ ಎಂದು ಸಿದ್ದು ಕಿಡಿಕಾರಿದ್ದಾರೆ.
ಕರಾವಳಿ ಭಾಗದಲ್ಲಿ ಕೋಮು, ಸೌಹಾರ್ದತೆಯನ್ನು ಕದಡಿದ ಹೆಸರು ಬಿಜೆಪಿಗೆ ಸಲ್ಲುತ್ತದೆ. ಕೋಮು ಸೌಹಾರ್ದತೆಯನ್ನು ಈ ಭಾಗದಲ್ಲಿ ಮತ್ತೆ ಸ್ಥಾಪಿಸುವುದು ನಮ್ಮ ಉದ್ದೇಶ.
ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಇದನ್ನು ಯಶಸ್ವಿ ಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗ ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ಮತ ನೀಡಿ ತಪ್ಪು ಮಾಡಿದೆವು ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಪರಮೇಶ್ವರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವರಾದ ಇಬ್ರಾಹಿಂ, ಜನಾರ್ದನ ಪೂಜಾರಿ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಗೋಪಾಲ ಭಂಡಾರಿ, ಯು.ಟಿ.ಖಾದರ್, ಮಾಜಿ ಸಚಿವ ವಸಂತ ಸಾಲ್ಯಾನ್ ಮುಂತಾದವರು ಪಾದಯಾತ್ರೆಯಲ್ಲಿ ಕಾಲು ಸವೆಸಿದರು.
ಪಾದಯಾತ್ರೆ ಇಂದು ಸಂಪನ್ನ
ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ಶುಕ್ರವಾರ (ಫೆ 1) ಸಂಪನ್ನಗೊಳ್ಳಲಿದೆ. ಉಡುಪಿ ನಗರದ ವಿವಿಧ ರಸ್ತೆಗಳಲ್ಲಿ ಪಾದಯಾತ್ರೆ ಸಾಗಲಿದ್ದು ಮಧ್ಯಾಹ್ನ ಉಡುಪಿ ಜಿಲ್ಲೆ ಮಲ್ಪೆಯಲ್ಲಿ ಸಾರ್ವಜನಿಕ ಸಭೆಯ ಮೂಲಕ ಪಾದಯಾತ್ರೆಗೆ ತೆರೆ ಬೀಳಲಿದೆ.