ಮಹಿಳಾ ಆಯೋಗಕ್ಕೆ ಮಂಜುಳಾ ರಾಜೀನಾಮೆ
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನವದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ರಾಜ್ಯದಲ್ಲಿ ಏಕಕಾಲಕ್ಕೆ 19 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇಂತಹ ಸಂದರ್ಭದಲ್ಲಿ ಮಹಿಳಾ ಆಯೋಗಕ್ಕೆ ಸರ್ಕಾರದಿಂದ ಯಾವುದೇ ಕೆಲಸವನ್ನು ಮಾಡಿಸಲು ಸಾಧ್ಯವಾಗುತ್ತಿಲ್ಲ. ಆಯೋಗವು ಅಸಹಾಯಕ ಸ್ಥಿತಿಯಲ್ಲಿದೆ.
ಅಲ್ಲದೆ,ಆಯೋಗದ ಶಿಫಾರಸುಗಳನ್ನು ಸರಕಾರ ಪರಿಗಣಿಸುತ್ತಿಲ್ಲ. ಈ ಕಾರಣಕ್ಕಾಗಿ ಬೇಸತ್ತಿರುವುದಾಗಿ ಹೇಳಿದ್ದಾರೆ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಡ್ಯದಲ್ಲಿ ರೈಲಿನಿಂದ ತಳ್ಳಲ್ಪಟ್ಟಿದ್ದ ಯುವತಿ ಆಶಾಗೆ ಪುನರ್ವಸತಿ ಕಲ್ಪಿಸುವುದು,ಹೆಣ್ಣುಮಕ್ಕಳ ಕಣ್ಮರೆ ಹಾಗೂ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷೆಗೆ ಸಂಬಂಧಿಸಿದಂತೆ ಆಯೋಗವು ನೀಡಿದ್ದ ಶಿಫಾರಸುಗಳನ್ನು ಸರಕಾರ ನಿರ್ಲಕ್ಷಿಸಿದೆ ಎಂದು ಮಂಜುಳಾ ಆರೋಪಿಸಿದರು.
ಸದ್ಯದಲ್ಲೆ ರಾಜ್ಯದ ಬಜೆಟ್ ಮಂಡನೆಯಿರುವುದರಿಂದ ಮಹಿಳೆಯರ ಸುರಕ್ಷತೆ ಮತ್ತು ಪ್ರಗತಿಗೆ ಸೂಕ್ತವಾದ ಶಿಫಾರಸುಗಳನ್ನು ಬಜೆಟ್ನಲ್ಲಿ ಅಳವಡಿಸುವ ಕುರಿತು ಆಯೋಗವು ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ಸರಕಾರ ಬಜೆಟ್ ಪೂರ್ವ ಸಭೆಗೆ ತಮ್ಮನ್ನು ಆಹ್ವಾನಿಸದೆ ಇರುವುದು ಮಹಿಳೆಯರಿಗೆ ಆದ ಅವಮಾನವೆಂದು ಭಾವಿಸುತ್ತೇನೆ ಎಂದು ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ವಿಚಾರ ಬಂದಾಗ ರೈತ ಸಂಘಟನೆಗಳನ್ನು ಕರೆದು ಬಜೆಟ್ ಪೂರ್ವ ಸಭೆ ನಡೆಸುವ ಸರ್ಕಾರ, ಮಹಿಳೆಯರ ಪರವಾಗಿ ಹಗಲಿರುಳು ಶ್ರಮಿಸುವ, ರಾಜ್ಯದ 3 ಕೋಟಿ ಮಹಿಳೆಯರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಮಹಿಳಾ ಆಯೋಗವನ್ನು ನಿರ್ಲಕ್ಷಿಸಿರುವುದು ಅಪಮಾನವೆಂದು ಭಾವಿಸಿ ತಾನು ಹಾಗೂ ಆಯೋಗದ ಸದಸ್ಯೆ ಸಿ.ಎನ್.ಗಾಯತ್ರಿ ದೇವಿ ರಾಜೀನಾಮೆಯನ್ನು ನೀಡುತ್ತಿದ್ದೇವೆ ಎಂದು ಮಂಜುಳಾ ಹೇಳಿದ್ದಾರೆ.
ಮಹಿಳಾ ಆಯೋಗವು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಶಿಫಾರಸುಗಳನ್ನು ಮಂಡಿಸಲು ಜ.10ರಂದು ರಾಜ್ಯಮಟ್ಟದ ಕಾರ್ಯಾಗಾರವನ್ನು ನಡೆಸಿತ್ತು. ಈ ಕಾರ್ಯಾಗಾರದಲ್ಲಿ ಮೂಡಿಬಂದ ಅಭಿಪ್ರಾಯಗಳನ್ನು ಶಿಫಾರಸುಗಳನ್ನಾಗಿ ಮಾಡಿ ಸರಕಾರಕ್ಕೆ ಸಲ್ಲಿಸಲು ಸಿದ್ಧತೆಯಲ್ಲಿತ್ತು ಅವರು ತಿಳಿಸಿದ್ದಾರೆ.
ಆದರೆ, ಮಹಿಳೆಯರ ಪರ ಹೋರಾಟಕ್ಕೆ ಸದಾ ಸಿದ್ಧ. ಅದಕ್ಕೆ ಸೂಕ್ತ ವೇದಿಕೆ ಅಗತ್ಯ ಹಾಗಾಗಿ ಮಹಿಳೆಯರ ಬಗ್ಗೆ ಕಾಳಜಿ ಇರುವ ಪಕ್ಷಕ್ಕೆ ಸೇರುತ್ತೇನೆ ಎಂದರು.