ಬೆಂಗಳೂರಿಗೆ ಅಂಟಿಕೊಂಡಂತೆ ಇನ್ನೂ 8 ಪಟ್ಟಣ ನಿರ್ಮಾಣ
ಬೆಂಗಳೂರು, ಫೆ.1: ಈ ಸುದ್ದಿಯನ್ನು ಕೇಳಿ ಆಯಾ ಭಾಗಗಳಲ್ಲಿ ಭೂಮಿಯ ಬೆಲೆ ಇಂದಿನಿಂದಲೇ ಗಗನಕ್ಕೆ ನೆಗೆಯುವುದು ನಿಶ್ಚಿತ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೃತೃತ್ವದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ಹಲವಾರು ಚುನಾವಣಾ-ಪ್ರೇರಿತ ನಿರ್ಧಾರಗಳಲ್ಲಿ ಇದೂ ಒಂದು. ಏನಪಾ ಅಂದರೆ 2,100 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಸುತ್ತಮುತ್ತ 8 ಕ್ಲಸ್ಟರ್ ಟೌನ್ ಗಳು ತಲೆ ಎತ್ತಲಿವೆ.
ಈ ಯೋಜನೆಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ (ಎಡಿಬಿ) 1,400 ಕೋಟಿ ಸಾಲ ಪಡೆಯಲಾಗುತ್ತದೆ. ಉಳಿದ 700 ಕೋಟಿಯನ್ನು ರಾಜ್ಯ ಸರ್ಕಾರ (KUIDFC) ಭರಿಸಲಿದೆ ಎಂದು ಕಾನೂನು ಸಚಿವ ಸುರೇಶ ಕುಮಾರ್ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಆ ಎಂಟು ಟೌನ್ ಗಳು ಎಲ್ಲೆಲ್ಲಿ ಅಂದಿರಾ? Bangalore Metropolitan Region Development Authority (BMRDA) ವ್ಯಾಪ್ತಿಗೆ ಬರುವ ಈ ಟೌನ್ ಗಳು ಎಲ್ಲೆಲ್ಲಿ ನಿರ್ಮಾಣವಾಗಲಿವೆಯೆಂದರೆ...
1
ರಾಮನಗರ-ಚನ್ನಪಟ್ಟಣ
2
ಕನಕಪುರ
3
ನೆಲಮಂಗಲ-ದಾಬಸ್ಪೇಟೆ
4
ದೊಡ್ಡಬಳ್ಳಾಪುರ
5
ಆನೇಕಲ್-ಜಿಗಣಿ
6
ದೇವನಹಳ್ಳಿ-ವಿಜಯಪುರ
7
ಹೊಸಕೋಟೆ
8
ಮಾಗಡಿ
ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ (2006ರಲ್ಲಿ) ಬಿಡದಿ, ರಾಮನಗರ, ಸಾತನೂರು, ಸೋಲೂರು ಮತ್ತು ನಂದಗುಡಿ ಭಾಗಗಳಲ್ಲಿ ಇಂತಹುದೇ ಕ್ಲಸ್ಟರ್ ಪಟ್ಟಣಗಳನ್ನು ನಿರ್ಮಿಸಿಕೊಡುವುದಾಗಿ ಘೋಷಿಸಿದ್ದರು. ಆದರೆ ಅವರು ಮುಖ್ಯಮಂತ್ರಿ ಪದವಯಿಂದ ಇಳಿಯುತ್ತಿದ್ದಂತೆ ಮತ್ತು ಆಯಾ ಭಾಗಗಳಲ್ಲಿ ರೈತರ ತೀವ್ರ ವಿರೋಧದಿಂದಾಗಿ ಅದು ಕೈಗೂಡಲಿಲ್ಲ.
2011ರ ಜನಗಣತಿ ಪ್ರಕಾರ ಬಿಎಂಆರ್ಡಿಎಲ್ ವ್ಯಾಪ್ತಿಯಲ್ಲಿ ನಗರದ ಜನಸಂಖ್ಯೆ 1.1 ಕೋಟಿ. 2030ರ ವೇಳೆಗೆ ಇದು 1.8 ಕೋಟಿಗೆ ವೃದ್ಧಿಯಾಗುವ ಅಂದಾಜಿದೆ. ರಾಜ್ಯ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ 2030ರ ವೇಳೆಗೆ ಈ ಎಲ್ಲ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ, ಮಳೆ ನೀರು ಚರಂಡಿ, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಸಮಗ್ರ ಮೂಲಸೌಕರ್ಯ ಒದಗಿಸಲಿದೆ.
ಇದರ ಜತೆಗೆ ಸಂಚಾರ ಸಾರಿಗೆ ನೀಡುವಲ್ಲಿಯೂ ಆಲೋಚಿಸಲಾಗಿದೆ. ಇದಲ್ಲದೆ, ಎರಡು ಹಳಿಗಳ ರೈಲು ಲಿಂಕ್ ಸೇವೆಯನ್ನೂ ನೀಡಲಾಗುತ್ತದೆ. ಈ ಬಗ್ಗೆ ಯೋಜನೆ ಸಿದ್ಧವಾಗುತ್ತಿದೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನೊಂದಿಗೆ ಚರ್ಚೆ ಆರಂಭವಾಗಿದ್ದು, ಎಲ್ಲವೂ ಪೂರ್ಣಗೊಂಡ ಮೇಲೆ ಯೋಜನೆ ಆರಂಭವಾಗುತ್ತದೆ. ಇದರ ಜತೆಗೆ, ತುಮಕೂರು ಹಾಗೂ ಕೋಲಾರವನ್ನೂ ಸಮಗ್ರ ಅಭಿವೃದ್ಧಿ ಮಾಡಲು ಆಸಕ್ತಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದರು.