ಗಣಿ ಸಗಣಿ: ಡಿಕೆಶಿ ವಿರುದ್ಧ ತನಿಖೆಗೆ ಆದೇಶ
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, 'ಇದೊಂದು ರಾಜಕೀಯ ಪ್ರೇರಿತ ದೂರು, ದೇವೇಗೌಡ, ಕುಮಾರಸ್ವಾಮಿ ಅವರು ಹಿರೇಮಠ್ ಬಳಸಿಕೊಂಡು ಷಡ್ಯಂತ್ರ ರೂಪಿಸಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಮೇಲೆ ರಾಜ್ಯದ ಬೊಕ್ಕಸಕ್ಕೆ 2 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ ಆರೋಪವನ್ನು ಹಿರೇಮಠ್ ಹೊರೆಸಿದ್ದರು.
ಮೈಸೂರು ಮಿನರಲ್ ಲಿಮಿಟೆಡ್ ಸೇರಿದಂತೆ ಡಿ.ಕೆ.ಶಿವಕುಮಾರ್ ನೇತೃತ್ವದ ಎಂಟು ಕಂಪನಿಗಳು 10 ಲಕ್ಷ 40 ಸಾವಿರ ಮೆಟ್ರಿಕ್ ಕಬ್ಬಿಣದ ಅದಿರು ಮತ್ತು ಮಣ್ಣನ್ನು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಿ (ಪ್ರತಿ ಮೆಟ್ರಿಕ್ ಟನ್ಗೆ 25,50,75 ರೂ.) ಸರ್ಕಾರದ ಬೊಕ್ಕಸಕ್ಕೆ ಹಾನಿಮಾಡಿದ್ದಾರೆ.
ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಮಧ್ಯಂತರ ಅರ್ಜಿಯನ್ನು ಮತ್ತೊಮ್ಮೆ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 8 ಕಂಪನಿಗಳ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಇಸಿಗೆ ಆದೇಶಿಸಿದೆ.
2005ರಲ್ಲಿ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಡಿಕೆಶಿ ನೇತೃತ್ವದ ವಿಕ್ಟರಿ ಎಕ್ಸ್ಪೋರ್ಟ್ಸ್, ಸಾಯಿ ಟ್ರೇಡಿಂಗ್ ಕಂಪನಿ, ಸ್ಕಂದ ಎಂಟರ್ಪ್ರೈಸಸ್, ಇಂಡಿಯನ್ ರಾಕ್ಸ್, ಪ್ರದೀಪ್ ಎಕ್ಸ್ಪೋರ್ಟ್ಸ್, ವಲ್ಲೀಸ್, ನೆಟ್ ಪ್ರಾಜೆಕ್ಟ್ ಸಲ್ಯೂಷನ್ಸ್ ಹಾಗೂ ಸುವಿ ಗ್ರಾನೈಟ್ಸ್ ಕಂಪನಿಗಳು ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ನಿಂದ ಅತಿ ಕಡಿಮೆ ಬೆಲೆಗೆ ಅಕ್ರಮವಾಗಿ ಅದಿರು ಖರೀದಿಸಿ, ಅದನ್ನು ಹೆಚ್ಚು ಬೆಲೆಗೆ ರಫ್ತು ಮಾಡಲಾಗಿದೆ ಎಂದು ಹಿರೇಮಠ ತಮ್ಮ ಅರ್ಜಿಯಲ್ಲಿ ದೂರಿದ್ದರು.
ಮಾತಾ ಮಿನರಲ್ಸ್ ಹಾಗೂ ಪ್ರವೀಣಚಂದ್ರ ಮೈನಿಂಗ್ ಕಂಪನಿ ಸೇರಿದಂತೆ ಹಲವು ಕಂಪನಿಗಳಿಂದ ದೊಡ್ಡ ಪ್ರಮಾಣದ ಅಕ್ರಮ ಅದಿರು ರಫ್ತು ನಡೆದಿದೆ. ಇವುಗಳ ಗಣಿಗಾರಿಕೆಯನ್ನು ನಿಲ್ಲಸಬೇಕು ಎಂದು ಕೋರಿ ಹಿರೇಮಠ ಅರ್ಜಿ ಸಲ್ಲಿಸಿದ್ದರು.
ಶಿವಕುಮಾರ್ ಹಾಗೂ ಅವರ ಪಾಲುದಾರರಾದ ಪಿ.ಕೆ.ಪೊನ್ನರಾಜ್ (ಸತ್ಯಂ ಗ್ರಾನೈಟ್) ಹಾಗೂ ಇತರ 8 ಕಂಪೆನಿಗಳು ಡಿಕೆಶಿ ಒಡೆತನದಲ್ಲಿದ್ದು, ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತದ ಮೂಲಕ ಅಕ್ರಮ ಸಂಪಾದನೆ ಮಾಡಿದ್ದಲ್ಲದೆ ಸರ್ಕಾರಿ ಸ್ವಾಮಿತ್ವದ ಮೈಸೂರ್ ಮಿನರಲ್ ಲಿಮಿಟೆಡ್ ಕಂಪೆನಿಗೆ ಆರ್ಥಿಕವಾಗಿ ನಷ್ಟ ಉಂಟುಮಾಡಿದ್ದಾರೆ.
ಮೈಸೂರ್ ಮಿನರಲ್ ಲಿಮಿಟೆಡ್ ಕಾರ್ಯ ನಿರ್ವಾಹಕ ನಿರ್ದೇಶಕರೂ ಸಹ ಗಂಭೀರ ಕರ್ತವ್ಯ ಲೋಪ ಎಸಗಿ ಸರ್ಕಾರಕ್ಕೆ ಹಾನಿ ಉಂಟು ಮಾಡಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹಿರೇಮಠ್ ಆಗ್ರಹಿಸಿದರು.