ಕೆಎಸ್ಸಾರ್ಟಿಸಿ 24 X 7 ಸಹಾಯವಾಣಿಗೆ ಚಾಲನೆ
ಪ್ರಯಾಣಿಕರು ತಮಗೆ ಬೇಕಾದ ಟಿಕೆಟ್ ಬುಕಿಂಗ್ /ರದ್ದತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಈಗ ಆನ್ಲೈನ್ ಮೂಲಕ ಕೇಳಿ ರಿಯಲ್ ಟೈಮ್ ಉತ್ತರ ಪಡೆಯಬಹುದಾಗಿದೆ. ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ವೆಬ್ ತಾಣ (www.ksrtc.in ) ಆನ್ ಲೈನ್ ಚಾಟ್ ಸೇವೆ ನಿಗಮದ ಅಂತರ್ಜಾಲದಲ್ಲಿ 24X 7 ಕಾಲದಲ್ಲಿ ಜನರಿಗೆ ಸ್ಪಂದಿಸಲು ಅವಕಾಶವಿದೆ. ಪ್ರಯಾಣಿಕರಿಗೆ ಯಾವುದಾದರೂ ಮಾಹಿತಿ ಬೇಕಿದ್ದಲ್ಲಿ ‘ಲೈವ್ ಚಾಟ್' ಬಟನ್ ಅಂತರ್ಜಾಲದಲ್ಲಿ ಒತ್ತಿದರೆ, ಕೂಡಲೆ ಗ್ರಾಹಕರ ಬೆಂಬಲಕ್ಕಾಗಿ ಏಜೆಂಟ್ರವರು ಬೇಕಾದ ಮಾಹಿತಿಯನ್ನು ಒದಗಿಸುತ್ತಾರೆ ಎಂದು ಕೆಎಸ್ಸಾರ್ಟಿಸಿ ಎಂಡಿ ಮಂಜುನಾಥ್ ಪ್ರಸಾದ್ ವಿವರಿಸಿದರು.
ಈ ಸೇವೆಯಿಂದ ಪ್ರಯಾಣಿಕರು/ಸಾರ್ವಜನಿಕರು ಗ್ರಾಹಕರ ಬೆಂಬಲಕ್ಕಾಗಿ ಏಜೆಂಟ್ರೊಂದಿಗೆ ಬಸ್ ಮಾರ್ಗ, ಆನ್ ಲೈನ್ ಬುಕಿಂಗ್, ಬಸ್ ಪ್ರಯಾಣದ ವೇಳಾಪಟ್ಟಿಯನ್ನು, ಅಲ್ಲದೆ ಪ್ರಯಾಣದಲ್ಲಿ ಉಂಟಾದ ಸಮಸ್ಯೆಗಳನ್ನು ಚರ್ಚಿಸಬಹುದು.
ಅಂತರ್ಜಾಲದಲ್ಲಿ ‘ಲೈವ್ ಚಾಟ್' ಅನ್ನು ಅಳವಡಿಸಲು ಮುಖ್ಯ ಕಾರಣ ನಿಗಮದ ಪ್ರಯಾಣಿಕರಲ್ಲಿ ಬಹಳಷ್ಟು ಮಂದಿ ಮಾಹಿತಿ ತಂತ್ರಜ್ಞಾನದ ಅರಿವುಳ್ಳವರಾಗಿದ್ದಾರೆ. ಹಾಗೂ ಅವರು ದೂರವಾಣಿ ಮಾಡುವುದಕ್ಕಾಗಲಿ/ಇಮೇಲ್ ಮೂಲಕ ಉತ್ತರಕ್ಕಾಗಲಿ ಕಾಯುವ ಅವಶ್ಯಕತೆ ಇರುವುದಿಲ್ಲ.
ಅಂತರ್ಜಾಲದಲ್ಲಿ ‘ಲೈವ್ಚಾಟ್' ಅಳವಡಿಸುವ ಮೂಲಕ ಪ್ರಯಾಣಿಕರಿಗೆ ದೂರವಾಣಿ ಸಂಭಾಷಣೆಯ ಸಮಯ ವ್ಯರ್ಥವಾಗುವುದಿಲ್ಲ. ಇದರ ಫಲಿತಾಂಶ ಪ್ರಯಾಣಿಕರಿಗೆ ಉತ್ತರಗಳು ಬಹಳ ಶೀಘ್ರವಾಗಿ, ಸುಲಭವಾಗಿ ದೊರಕುತ್ತದೆ ಎಂದು ಅವರು ಹೇಳಿದ್ದಾರೆ.
‘ನಾವು ಪ್ರಯಾಣಿಕರಿಗೆ ನಿಗಮದೊಂದಿಗೆ ಆನ್ಲೈನ್ ಸಂಪರ್ಕದಿಂದ ಉತ್ತಮ ಸಂಬಂಧ ಬೆಳೆಸಲು ಹಾಗೂ ಅಂತರ್ಜಾಲ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಆಶಿಸುತ್ತೇವೆ ಎಂದು ತಿಳಿಸಿರುವ ಅವರು, ನಿಗಮ ಅಂತರ್ಜಾಲದಲ್ಲಿ ಹೊಸ ಚಾಟ್ ಸೇವೆಯಲ್ಲಿ ಉನ್ನತ ತಂತ್ರಜ್ಞಾನ ಅಳವಡಿಸಲಾಗಿದೆ ಎಂದಿದ್ದಾರೆ.
ನಿಗಮವು 2012ರಲ್ಲಿ ಸಾಮಾಜಿಕ ಮಾರ್ಕೆಟಿಂಗ್ಗಾಗಿ ಅತ್ಯುನ್ನತ ‘ಡಿಜಿರಟ್ಟಿ ಪ್ರಶಸ್ತಿ-2012' ಅನ್ನು ಪಡೆದಿದೆ. ಅಲ್ಲದೇ, ನಿಗಮ ಫೇಸ್ಬುಕ್, ಟ್ವಿಟರ್ ಹಾಗೂ ಇತರ ಸಾಮಾಜಿಕ ಜಾಲದಲ್ಲಿ ಬಹಳ ಆಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ, ಉತ್ಕೃಷ್ಟ ಪ್ರಯಾಣಿಕ ಸಹಾಯ ಸೇವೆಯನ್ನು ಒದಗಿಸಲಾಗಿದೆ. ಆನ್ ಲೈನ್ ಟಿಕೆಟ್ ಬುಕ್ಕಿಂಗ್, ಪೇಪರ್ ಲೆಸ್ ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.