ಇನ್ಫೋಸಿಸ್ ಎಚ್ ಆರ್ ನಂದಿತಾ ಸ್ಥಾನ ಪಲ್ಲಟ
ನಂದಿತಾ ಗುರ್ಜಾರ್ ಅವರಿಗೆ ಹೊಸ ಜವಾಬ್ದಾರಿಯನ್ನು ನೀಡಲಾಗಿದ್ದು, ಹೊರಗುತ್ತಿಗೆ ವಿಭಾಗಕ್ಕೆ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಆಯ್ಕೆ ಮಾಡುವ ಹೊಣೆ ಹೊರಲಿದ್ದಾರೆ ಎಂದು ಬುಧವಾರ(ಜ.30) ರಾತ್ರಿ ಪ್ರಕಟಿಸಲಾಗಿತ್ತು.
ಮಾಹಿತಿ ಮತ್ತು ತಂತ್ರಜ್ಞಾನ ವಲಯದ ಎರಡನೇ ಅತಿ ದೊಡ್ಡ ಕಂಪನಿ ಇನ್ಫೋಸಿಸ್ ಈ ಬಗ್ಗೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಇನ್ಫೋಸಿಸ್ ನ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದ ಶ್ರೀಕಂಠನ್ ಮೂರ್ತಿ ಅವರು ಹೊಸ ಗ್ಲೋಬಲ್ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಬಿಪಿಒಗೆ ಸಿಇಒ ಹಾಗೂ ಎಂಡಿ ಆಯ್ಕೆ ಮಾಡುವುದರ ಜೊತೆಗೆ ಗುರ್ಜಾರ್ ಅವರು ಶ್ರೀಕಂಠನ್ ಅವರು ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಣ ಮತ್ತು ಸಂಶೋಧನಾ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.
ಬಿಪಿಒಗೆ ಹೊಸ ಸಿಇಒ: ಗೌತಮ್ ಠಕ್ಕರ್ ಅವರನ್ನು ಇನ್ಫೋಸಿಸ್ ಬಿಪಿಒ ಸಂಸ್ಥೆಯ ನೂತನ ಸಿಇಒ ಹಾಗೂ ಎಂಡಿ ಎಂದು ನಂದಿತಾ ಅವರು ಗುರುವಾರ(ಜ.31) ಘೋಷಿಸಿದ್ದಾರೆ.
2000ನಿಂದ ಇನ್ಫೋಸಿಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಠಕ್ಕರ್ ಅವರು ಇನ್ಫೋಸಿಸ್ ಬಿಪಿಒನ ಎಂಟರ್ ಪ್ರೈಸಸ್ ಸರ್ವೀಸಸ್ ಬಿಸಿನೆಸ್ ನ ಉಪಾಧ್ಯಕ್ಷರಾಗಿ ಹಾಗೂ ಸಿಇಒನಿಂದ ಏ.1ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
ಸ್ವಾಮಿ ಸ್ವಾಮಿನಾಥನ್ ಅವರು ಏ.30ರಂದು ನಿವೃತ್ತಿ ಹೊಂದುತ್ತಿರುವುದರಿಂದ ಅವರ ಜಾಗಕ್ಕೆ ಹೊಸ ನೇಮಕಾತಿ ಮಾಡುವುದು ನಿರೀಕ್ಷಿತವಾಗಿತ್ತು. ಆದರೆ, ಎಚ್ ಅರ್ ಬದಲಾವಣೆ ಬಗ್ಗೆ ಕಾರ್ಪೊರೇಟ್ ವಲಯದಲ್ಲಿ ಗಾಳಿಸುದ್ದಿ ಹಬ್ಬಿದ್ದರೂ ನಂದಿತಾ ಸ್ಥಾನ ಪಲ್ಲಟ ಬಗ್ಗೆ ಅನುಮಾನವಿತ್ತು.
1999ರಲ್ಲಿ ಇನ್ಫೋಸಿಸ್ ಸಂಸ್ಥೆಗೆ ಸೇರ್ಪಡೆಗೊಂಡ ನಂದಿತಾ ಅವರು ಇನ್ಫೋಸಿಸ್ ಬಿಪಿಒನ HR ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 2007ರಲ್ಲಿ ಇನ್ಫೋಸಿಸ್ ನ ಜಾಗತಿಕ ಎಚ್ ಆರ್ ಆಗಿ ಬಡ್ತಿ ಪಡೆದಿದ್ದರು. ಇತ್ತೀಚೆಗೆ ಅಮೆರಿಕ ಪ್ರವಾಸದಲ್ಲಿದ್ದ ನಂದಿತಾ ಅವರು ಉತ್ತರ ಅಮೆರಿಕ ಭಾಗದಲ್ಲಿ ಹೊಸ ಎಚ್ ಆರ್ ವಿಭಾಗ ಆರಂಭಿಸಿ ಪ್ರತ್ಯೇಕ ಎಚ್ ಆರ್ ನೇಮಕಾತಿ ಬಗ್ಗೆ ಕಾರ್ಯನಿರ್ವಹಿಸಿದ್ದರು.
ಆದರೆ, ನಂದಿತಾ ಅವರು ಅಮೆರಿಕಕ್ಕೆ ಹೋಗಿದ್ದು, ಇನ್ಫೋಸಿಸ್ ನ ಬಹುಕಾಲ ಸಮಸ್ಯೆಯಾಗಿಯಾಗಿರುವ ವೀಸಾ ವಂಚನೆ ವಿವಾದಕ್ಕೆ ಪರಿಹಾರ ಹುಡುಕಲಿಕ್ಕೆ ಎಂಬುದು ಕಂಪನಿಯ ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ವೀಸಾ ಕೇಸಿನಿಂದ ಬಚಾವಾಗಿದೆ.
ಅಮೆರಿಕದಲ್ಲಿ ಸುಮಾರು 10 ವರ್ಷ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವುಳ್ಳ ಮೂರ್ತಿ ಅವರ ಆಯ್ಕೆ ಐಟಿ ವಲಯದಲ್ಲಿ ಅಚ್ಚರಿ ಮೂಡಿಸಿಲ್ಲ. ಪ್ರತಿಭಾ ಶೋಧ ಹಾಗೂ ವೃತ್ತಿಪರರ ತರಬೇತಿ ನೀಡಲು ಮೂರ್ತಿ ತೆಗೆದುಕೊಂಡ ನಿರ್ಣಯಗಳು ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು ಕೇಂದ್ರದಲ್ಲಿ ಪ್ರತಿ ವರ್ಷ ಸುಮಾರು 13,500 ವಿದ್ಯಾರ್ಥಿಗಳು ತರಬೇತಿ ಪಡೆದು ವೃತ್ತಿಪರರೆನಿಸುತ್ತಿದ್ದಾರೆ.
ಒಟ್ಟಾರೆ ಏಷ್ಯಾದ ಅತಿ ದೊಡ್ಡ ಕಾರ್ಪೊರೇಟ್ ತರಬೇತಿ ನೀಡುವ ಇನ್ಫೋಸಿಸ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳು ಕಾದಿದೆ.