ಕೋಡಿಮಠದ ಶ್ರೀಗಳು ನುಡಿದ ಭವಿಷ್ಯವೇನು, ಆಗಿದ್ದೇನು?
ಕಲಿಯುಗದಲ್ಲಿ ದಿನಗಳು ಉರುಳುತ್ತಿದ್ದಂತೆ ಜನಸಾಮಾನ್ಯರಿಗೆ ದೇವರು, ದಿಂಡ್ರು, ಮಠ ಮಾನ್ಯ, ಭವಿಷ್ಯದ ಮೇಲೆ ನಂಬಿಕೆಗಳು ಹೆಚ್ಚಾಗುತ್ತಾ ಸಾಗುತ್ತಿದೆ. ಕರಾರುವಕ್ಕಾಗಿ ಭವಿಷ್ಯ ನುಡಿಯುತ್ತೇವೆ ಎಂದು ಜನರನ್ನು ಮುಂಡಾಯಿಸುವ, ತಮ್ಮ ಭವಿಷ್ಯವನ್ನೇ ರೂಪಿಸಿಕೊಳ್ಳಲಾಗದೇ ಬೇರೆಯವರ ಭವಿಷ್ಯ ನುಡಿಯುವ ಡೋಂಗಿ ಭವಿಷ್ಯಕಾರರಿಗೆ ನಾಡಿನಲ್ಲಿ ಕೊರತೆಯಿಲ್ಲ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ ಭವಿಷ್ಯ ನುಡಿಯುವವರಿಗೆ ಎಲ್ಲಿಲ್ಲದ ಡಿಮಾಂಡ್. ಜಲಪ್ರಳಯ, ರಾಜಕೀಯ ಅಸ್ಥಿರತೆ, ಭೂಕಂಪ, ಸಾವು, ನೋವು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಭವಿಷ್ಯ ನುಡಿದು ಜನರನ್ನು ತಮ್ಮತ್ತ ಆಕರ್ಷಿಸುವ /ಭಯ ಹುಟ್ಟಿಸುವ ಕೆಲಸಗಳು ನಡೆಯುತ್ತಲೇ ಇದೆ.
ಇದಕ್ಕೆ ಪೂರಕವಾಗಿ ಮಾಧ್ಯಮಗಳು ಮತ್ತು ಅಂತರ್ಜಾಲ ತಾಣಗಳು ಕೂಡಾ ಭವಿಷ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತಿದ್ದದ್ದು ಸತ್ಯ ಸಂಗತಿ.
ಭವಿಷ್ಯ ಎಂದಾಕ್ಷಣ ರಾಜ್ಯದ ಜನತೆಗೆ ಮಂಚೂಣಿಯಲ್ಲಿ ನೆನಪಿಗೆ ಬರುವ ಮೊದಲ ಹೆಸರೆಂದರೆ ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು. ರಾಜಕೀಯ, ಭದ್ರತೆ, ಅಸ್ಥಿರತೆ, ಸಾಮಾಜಿಕ ಏರಿಳಿತಗಳ ಬಗ್ಗೆ ಅವರು ನುಡಿಯುವ ಭವಿಷ್ಯ ಹೆಚ್ಚಿನ ತೂಕದ್ದಾಗಿರುತ್ತದೆ ಎನ್ನುವುದು ಒಟ್ಟಾರೆ ಅಭಿಪ್ರಾಯ.
ಕೋಡಿಮಠದ ಶ್ರೀಗಳು ಇದುವರೆಗೆ ನುಡಿದ ಭವಿಷ್ಯವೇನು? ಅದರಲ್ಲಿ ನಿಜವಾಗಿದ್ದು ಯಾವುದು? ಸುಳ್ಳಾಗಿದ್ದು ಯಾವುದು? ಅದರ ಒಂದು ಝಲಕ್ ಮುಂದಿನ ಸ್ಲೈಡ್ ಗಳಲ್ಲಿ
ಎಪ್ರಿಲ್ 11, 2011 (ರಾಯಚೂರಿನಲ್ಲಿ)
ವಿಶ್ವದಲ್ಲಿ ವಾಯು ಪ್ರಳಯವಾಗುತ್ತದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ. ದೈವತ್ವಕ್ಕೀಡಾದ ಧಾರ್ಮಿಕ ಗುರು ಒಬ್ಬರು ಅಸ್ತಂಗತರಾಗಲಿದ್ದಾರೆ. ಅವರ ಸಾವಿನಿಂದ ಜನತೆ ಅಪಾರ ನೋವಿಗೆ ಈಡಾಗುತ್ತಾರೆ. ಎಪ್ರಿಲ್ 24, 2011ರಂದು ಆಂಧ್ರದ ಪುಟ್ಟಪರ್ತಿಯಲ್ಲಿ ಸತ್ಯ ಸಾಯಿಬಾಬಾ ನಿಧನ.
ಆಗಸ್ಟ್ 22, 2012 (ರಬಕವಿ, ಬಾಗಲಕೋಟೆಯಲ್ಲಿ)
2012ರ ಡಿಸೆಂಬರಿಗೆ ಪ್ರಳಯ ಸಂಭವಿಸುತ್ತದೆ ಎನ್ನುವುದೆಲ್ಲಾ ಶುದ್ಧ ಬೊಗಳೆ. ಈ ಬಗ್ಗೆ ಜನ ಭಯಭೀತರಾಗುವ ಅಗತ್ಯವಿಲ್ಲ. ಅಂಥದ್ದೇನೂ ಘಟಿಸುವುದಿಲ್ಲ.
ಡಿಸೆಂಬರ್ 20, 2011 (ಹಾಸನದಲ್ಲಿ)
ಮುಖ್ಯಮಂತ್ರಿ ಸದಾನಂದ ಗೌಡರು ಡಿ. 22 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯ ಗಳಿಸುವುದಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಆನಂತರದ ದಿನಗಳಲ್ಲಿ ಅವರು ರಾಜಕೀಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜುಲೈ 11, 20112 ಮುಖ್ಯಮಂತ್ರಿ ಹುದ್ದೆಗೆ ಸದಾನಂದ ಗೌಡ ರಾಜೀನಾಮೆ.
ಮಾರ್ಚ್ 7, 2012 (ಮಂಗಳೂರಿನಲ್ಲಿ)
ಮುಂದಿನ ಚುನಾವಣೆ ಬರುವುದರೊಳಗೆ ಬಿಜೆಪಿ ಮೂರು ಭಾಗ ಆಗುತ್ತದೆ. ಸದ್ಯಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಚಾನ್ಸ್ ಇಲ್ಲವೇ ಇಲ್ಲ. ಅಧಿಕೃತವಾಗಿ ಬಿಜೆಪಿ ಈಗ ಬಿಜೆಪಿ, ಕೆಜೆಪಿ, BSR ಕಾಂಗ್ರೆಸ್ ಎಂದು ಮೂರು ಭಾಗವಾಗಿದೆ.
ನವೆಂಬರ್ 10, 2011 (ಗದಗಿನಲ್ಲಿ)
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ. ಕೊನೆಗೆ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆ. ಆ ಸರಕಾರ ಕೂಡ ಹೆಚ್ಚಿಗೆ ಬಾಳುವುದಿಲ್ಲ ಎಂದಿದ್ದರು. ಆದರೆ ಬಿಜೆಪಿ ತನ್ನ ಅಧಿಕಾರದ ಅವಧಿ ಪೂರೈಸಲು ಮೂರು ತಿಂಗಳಷ್ಟೇ ಬಾಕಿಯಿದೆ.
ನವೆಂಬರ್ 2, 2011 (ಚನ್ನರಾಯಪಟ್ಟಣದಲ್ಲಿ)
ಶೋಕೇಸಿನಲ್ಲಿ ಕೂತಿದ್ದ ಮುತ್ತಿನ ಗಿಳಿಯೂ ಮಾತನಾಡಲಿದೆ. ಇದು ಶುಭದ ಸಂಕೇತವಲ್ಲ. ಕರ್ನಾಟಕದಲ್ಲಿ ಉಗ್ರರಿಂದ ದಾಳಿಯಾಗುವ ಸಂಭವನೀಯತೆ ಇದೆ ಎಂದು ನುಡಿದಿದ್ದರು. ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಅಂಥದ್ದೇನೂ ಘಟನೆ ನಡೆದಿಲ್ಲ.
ಜುಲೈ 27, 2011 (ಕೋಡಿಮಠದಲ್ಲಿ)
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ ಸ್ವಾಮೀಜಿಗಳು. ಕರ್ನಾಟಕ ಸರ್ಕಾರಕ್ಕೆ ಕಂಟಕವಿದೆ ಎಂದಿದ್ದರು. ಅದಾದ ನಾಲ್ಕು ದಿನದ ನಂತರ ಜುಲೈ 31, 2011 ರಂದು ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.
ಮೇ 11, 2009 (ಹಾಸನದಲ್ಲಿ)
ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಅವರಿಗೆ ಅಧಿಕಾರ ನಡೆಸುವ ರಾಜಯೋಗವಿಲ್ಲ, ಯಾರೇ ಅಧಿಕಾರಕ್ಕೆ ಬಂದರೂ ಅದರ ಆಯುಷ್ಯ ಕೇವಲ ಎರಡು ವರ್ಷ ಮಾತ್ರ ಎಂದು ಶ್ರೀಗಳು ಭವಿಷ್ಯ ನುಡಿದಿದ್ದರು. ಆಡ್ವಾಣಿ ಪ್ರಧಾನಿಯಾಗಲಿಲ್ಲ ಆದರೆ ಸರಕಾರದ ಭವಿಷ್ಯ ನಾಲ್ಕು ವರ್ಷವಾದರೂ ಸುಭದ್ರವಾಗಿದೆ.