ಶಾಲೆ ಜಾಗ ಆಶ್ರಮಕ್ಕೆ ಕೊಟ್ಟರೆ ಎಚ್ಚರ: ಜೆಡಿಎಸ್
ಸರ್ಕಾರ ಸರಿಯಾದ ಮಾಹಿತಿ ಒದಗಿಸದಿದ್ದರೆ ಅಥವಾ ಪೂರಕವಾಗಿ ಸ್ಪಂದಿಸದಿದ್ದರೆ, ನ್ಯಾಯಾಲಯದ ಮೊರೆ ಹೋಗಲು ಸಿದ್ಧವಿರುವುದಾಗಿ ಶಾಸಕ ಸಾ.ರಾ.ಮಹೇಶ್ ಎಚ್ಚರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಹಲವು ಸರ್ಕಾರಿ ಕಚೇರಿಗಳೇ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶವಿಲ್ಲದೇ ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ.
ಪರಿಸ್ಥಿತಿ ಹೀಗಿರುವಾಗ ನಗರದ ಹೃದಯ ಭಾಗದ ಸರಕಾರಿ ಶಾಲೆ ನಡೆಯುತ್ತಿರುವ ಜಾಗವನ್ನು ಆಶ್ರಮಕ್ಕೆ ನೀಡುವುದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತೋರಿರುವ ಆಸಕ್ತಿ ಅನುಮಾನಕ್ಕೆ ಎಡೆಮಾಡಿದೆ. ಶಾಲೆ ಜಾಗ ಪರಭಾರೆ ಮಾಡುವಲ್ಲಿ ಸಚಿವ ರಾಮದಾಸ್ ಅವರ ವೈಯಕ್ತಿಕ ಹಿತಾಸಕ್ತಿ ಇರುವುದು ಸ್ಪಷ್ಟವಾಗುತ್ತದೆ. ಈ ಬಗ್ಗೆ ಫೆ. 4ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಮಹೇಶ್ ತಿಳಿಸಿದರು.
ಆಶ್ರಮಕ್ಕೆ ವರ್ಗಾಯಿಸಿರುವ ಜಾಗದ ಸರ್ಕಾರಿ ವೌಲ್ಯ ಅಂದಾಜು 15 ಕೋಟಿ ರೂ.ಗಳಿಗೂ ಹೆಚ್ಚಾಗುತ್ತದೆ. ಬಹಿರಂಗ ಮಾರುಕಟ್ಟೆಯಲ್ಲಿ 40 ಕೋಟಿ ರೂಪಾಯಿಗೂ ಹೆಚ್ಚು ಹೊರ ಮಾರುಕಟ್ಟೆಯಲ್ಲಿ ವೌಲ್ಯ ಹೊಂದಿದೆ.
ಇದರೊಟ್ಟಿಗೆ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ 6 ಆರು ಕೋಟಿ ರೂ.ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಶೇ. 50ರಷ್ಟು ಭಾಗ ಬರದಿಂದ ತತ್ತರಿಸಿರುವ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಿಗೆ ಹಣ ವಿನಿಯೋಗ ಮಾಡುವುದನ್ನು ಬಿಟ್ಟು ಅನಗತ್ಯ ಕಾರ್ಯಗಳಿಗೆ ಹಣ ವ್ಯಯಿಸುತ್ತಿರುವ ಉಸ್ತುವಾರಿ ಸಚಿವರ ಕ್ರಮ ಖಂಡನೀಯ ಎಂದು ಮಹೇಶ್ ಹೇಳಿದರು.