ರಾಣಿ 100 ಕೆಜಿ ಚಿನ್ನ ಕೊಡ್ತೀನಿ ಅಂದ್ರೂ ಬೇಡವೆಂದರು
ಪಟ್ನಾ, ಜ.27: ನಾವೂ ಬುದ್ಧನನ್ನೇ ಪೂಜಿಸುವುದು. ಆದ್ದರಿಂದ ನಿಮ್ಮ ದೇಶದಲ್ಲಿರುವ ದೇಗುಲಕ್ಕೆ 100 ಕೆಜಿ ಚಿನ್ನ ಕೊಡ್ತೀವಿ ತಗೋಳ್ಳಿ ಅಂತ ಥಾಯ್ಲೆಂಡ್ ರಾಣಿ ಸಿರಿಕಿಟ್ ಅಂದ್ರೂ ಇಂಥದ್ದೊಂದು ಅಪರೂಪದ ಪ್ರಸ್ತಾಪ ಒಪ್ಪಿಕೊಳ್ಳಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಿಂದೇಟು ಹಾಕಿದ್ದಾರೆ. ಯಾಕಪ್ಪಾ ಅಂದರೆ ಕಳ್ಳಕಾಕರ ಭಯ.
ಇನ್ನು 100 ಕೆಜಿ ಚಿನ್ನಕ್ಕೆ ವಿಶೇಷ ಭದ್ರತೆ ಕಲ್ಪಿಸುವ ಗೊಡವೆಯೇಕೆ ಎಂದು ಯೋಚಿಸಿದ ಸಿಎಂ ನಿತೀಶ್, ರಾಣಿಯ ಅಫರ್ ಬೇಡ ಎಂದಿದ್ದಾರೆ. ಆದರೆ ಬುದ್ಧನ ಪರಮಭಕ್ತೆಯಾದ ರಾಣಿ ಸಿರಿಕಿಟ್ ಅವರು ಏನಾದರಾಗಲಿ ತಮ್ಮ ಚಿನ್ನದ ಕಾಣಿಕೆಯನ್ನು ಅರ್ಪಿಸಿಯೇ ಸಿದ್ಧವೆಂದು ಮಧ್ಯಸ್ಥಿಕೆ ವಹಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ, ನಟ ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ.
ಬಿಹಾರದ ಬುದ್ಧ ಗಯಾದಲ್ಲಿ ನಿರ್ಮಾಣವಾಗಿರುವ ಪ್ರಾಚೀನ ಬೌದ್ಧ ದೇವಾಲಯದ ಗೋಪುರ ನಿರ್ಮಾಣಕ್ಕೆ 100 ಕೆಜಿ ಚಿನ್ನ ಕೊಡಲು ಥಾಯ್ಲೆಂಡ್ ರಾಣಿ ಸಿರಿಕಿಟ್ ಅವರ ಟ್ರಸ್ಟ್ 5 ತಿಂಗಳ ಹಿಂದೆಯೇ ಮುಂದೆ ಬಂದಿದೆ. ಮಾರುಕಟ್ಟೆಯಲ್ಲಿ ಈ ಚಿನ್ನದ ಮೌಲ್ಯ 35 ಕೋಟಿ ರೂಪಾಯಿ.
ಚಿನ್ನದಂತಹ ಅವಕಾಶ ಬೇಡವೆಂದರು: ದೇವಾಲಯಕ್ಕೆ ಭಾರಿ ಮೌಲ್ಯದ ಚಿನ್ನದ ಗೋಪುರ ನಿರ್ಮಾಣ ಮಾಡಿದರೆ ಕಾನೂನು ಸುವ್ಯಸವ್ಥೆ ಸಮಸ್ಯೆ ಎದುರಾಗಲಿದೆ. ಅಲ್ಲದೇ ದೇವಾಲಯವನ್ನು ರಕ್ಷಿಸುವುದು ಕಷ್ಟವಾಗುವ ಕಾರಣದಿಂದ ದೇಣಿಗೆ ಸ್ವೀಕರಿಸಲು ರಾಜ್ಯ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಥಾಯ್ ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಭಾರತೀಯ ಪ್ರತಿನಿಧಿಗಳು ನಿನ್ನೆ ಬ್ಯಾಂಕಾಕ್ನಲ್ಲಿದ್ದ ಚಿರಂಜೀವಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ತಾವು ನಿತೀಶ್ ಸರ್ಕಾರದ ಜತೆ ಮಾತುಕತೆ ನಡೆಸುವುದಾಗಿ ಚಿರಂಜೀವಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಚಿರಂಜೀವಿಯನ್ನು ತರಾಟೆಗೆ ತೆಗೆದುಕೊಂಡ ಬೌದ್ಧ ಅನುಯಾಯಿಗಳು: ಬಿಹಾರದ ಮಹಾಬೋಧಿ ದೇವಸ್ಥಾನ ನಮಗೆ ಅತ್ಯಂತ ಪವಿತ್ರವಾಗಿದೆ. ದೇವಸ್ಥಾನದ ಸುತ್ತಮುತ್ತಲ ನೆಲ ಪವಿತ್ರವಾಗಿದೆ. ಹಾಗಾಗಿ ನಾವು ಇಲ್ಲಿನ ಹಿಡಿ ಮಣ್ಣನ್ನು ನಮ್ಮೊಂದಿಗೆ ತೆಗೆದುಕೊಂಡುಹೋಗುತ್ತೇವೆ. ಆದರೆ ಸ್ಥಳೀಯ ಆಡಳಿತ ಇಲ್ಲಿ ನೈರ್ಮಲ್ಯವನ್ನೇ ಕಾಪಾಡುವುದಿಲ್ಲ. ಜನ ಎಲ್ಲೆಂದರಲ್ಲಿ ಮೂತ್ರವಿಸರ್ಜನೆ ಮುಂತಾದುವುನ್ನು ಮಾಡಿ ಮಲಿನಗೊಳಿಸುತ್ತಾರೆ.
ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಂಡು ನಾವು ತೆಗೆದುಕೊಂಡು ಹೋಗುವುದಾದರೂ ಹೇಗೆ ನೀವೆ ಹೇಳಿ ಎಂದು ಸಚಿವ ಚಿರಂಜೀವಿ ಅವರನ್ನು ಬ್ಯಾಂಕಾಕ್ನಲ್ಲಿ ಬೌದ್ಧ ಅನುಯಾಯಿಗಳು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.