ಕಮಲ್ 'ವಿಶ್ವರೂಪಂ' ರದ್ದು; 45 ಮಂದಿ ಬಂಧನ, ರಕ್ತದಾನ
ಬೆಂಗಳೂರು, ಜ.27: ಚಿತ್ರದಲ್ಲಿ ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ 95 ಕೋಟಿ ರು. ವೆಚ್ಚದಲ್ಲಿ ನಿರ್ಮಿತವಾಗಿರುವ ಬಹುಭಾಷೀಯ ಚಿತ್ರ ವಿಶ್ವರೂಪಂ ವಿರುದ್ಧ ಚಿತ್ರಪ್ರೇಮಿಗಳು ವಿಶ್ವರೂಪ ತೋರುತ್ತಿದ್ದಾರೆ.
ಅಲ್ಲಲ್ಲಿ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಕೆಲವೆಡೆ ತೆರೆ ಕಂಡಿತ್ತು. ಆದರೆ ಬೆಂಗಳೂರು, ಮೈಸೂರು, ಭದ್ರಾವತಿ ಮತ್ತು ರಾಯಚೂರಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ.
ಕಮಲ್ ನಟಿಸಿರುವ ವಿಶ್ವರೂಪಂ ಚಿತ್ರ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ಶನಿವಾರವೂ ಅಡ್ಡಿ ಉಂಟಾಯಿತು. ಸೋಮವಾರದವರೆಗೆ ಪ್ರದರ್ಶನ ತಡೆಹಿಡಿಯುವಂತೆ ನಗರ ಪೊಲೀಸರು ಪ್ರದರ್ಶಕರಿಗೆ ಮನವಿ ಮಾಡಿದ್ದಾರೆ. ಆದರೆ ಭಾನುವಾರ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕಮಲ್ ಅಭಿಮಾನಿಗಳು ಊರ್ವಶಿ ಟಾಕೀಸ್ ಬಳಿ ರಕ್ತದಾನ ಕಾರ್ಯಕ್ರಮ ನಡೆಸಿದ್ದಾರೆ.
ಇದೇ ವೇಳೆ ಭದ್ರಾವತಿಯ ವಾಗೀಶ್ ಚಿತ್ರಮಂದಿರದಲ್ಲಿ ಶನಿವಾರದ ಬೆಳಗ್ಗಿನ ಪ್ರದರ್ಶನಕ್ಕೆ ಟಿಕೆಟ್ ನೀಡುತ್ತಿದ್ದಾಗ 2 ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಮಲ್ ಹಾಸನ್ ಕಟೌಟಿಗೆ ಹಾರ ಹಾಕುತ್ತಿದ್ದಾಗ ಅಲ್ಲಿಗೆ ಬಂದ ಕೆಲ ಮುಸ್ಲಿಂ ಯುವಕರು ಚಿತ್ರಮಂದಿರದೊಳಕ್ಕೆ ನುಗ್ಗಿ ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.
ಬಳಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಶಾಲಾ ಕಾಲೇಜಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಇಂದು ಭಾನುವಾರ ಭದ್ರಾವತಿಯಲ್ಲಿ ವಾರದ ಸಂತೆಯನ್ನು ರದ್ದು ಪಡಿಸಲಾಗಿದೆ. ಇದೇ ವೇಳೆ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪೊಲೀಸರು 45 ಮಂದಿಯನ್ನು ಬಂಧಿಸಿದ್ದಾರೆ.
ಇನ್ನು, ಮೈಸೂರಿನಲ್ಲಿ ಬಾಲಾಜಿ ಚಿತ್ರಮಂದಿರಲ್ಲಿ ಗಾಜು ಧ್ವಂಸಗೊಳಿಸಿ ಸ್ಕ್ರೀನ್ಗೆ ಹಾನಿ ಮಾಡಲಾಗಿದೆ. ಪೊಲೀಸರ ಸೂಚನೆ ಹಿನ್ನೆಲೆಯಲ್ಲಿ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.
ಮಲೇಷ್ಯಾದಲ್ಲೂ 'ವಿಶ್ವರೂಪಂ'ಗೆ ನಿಷೇಧ ಹೇರಲಾಗಿದೆ. ಶುಕ್ರವಾರ ಚಿತ್ರ ಬಿಡುಗಡೆಯಾಗಿತ್ತು. ಆದರೆ ಶನಿವಾರ ಅಲ್ಲಿನ ಗೃಹ ಇಲಾಖೆ ನಿರ್ದೇಶನದ ಹಿನ್ನೆಲೆಯಲ್ಲಿ ಚಿತ್ರದ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ ಎಂದು ವಿತರಕರು ಹೇಳಿದ್ದಾರೆ.
ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಕೆ. ವೆಂಕಟರಾಮನ್ ಶನಿವಾರ ವಿಶ್ವರೂಪಂ ಚಿತ್ರವನ್ನು ವೀಕ್ಷಿಸಿದ್ದಾರೆ. ಸೋಮವಾರ ಈ ಸಂಬಂಧ ತೀರ್ಪು ನೀಡಲಿದ್ದಾರೆ.