'ಏ ಮೇರೆ ವತನ್ ಕೆ ಲೋಗೋಂ'ಗೆ 50ರ ಪ್ರಾಯ!
ನವದೆಹಲಿ, ಜ.26: ದೇಶ ಗಣರಾಜ್ಯವಾಗಿ ಮಾರ್ಪಟ್ಟ 14 ವರ್ಷಗಳ ತರುವಾಯ ದಿವಿನಾದ ಜ. 27ರಂದು ದೀದಿ ಲತಾ ಮಂಗೇಶ್ಕರ್ ಅವರು ದೇಶವಾಸಿಗಳ ಹೃದಯಗಳಲ್ಲಿ ಶಾಶ್ವತವಾಗಿ ಉಳಿಯುವಂತಹ ಹಾಡೊಂದನ್ನು ಪ್ರಧಾನಿ ಜವಾಹರಲಾಲ ನೆಹರೂ ಅವರ ಸಮ್ಮುಖದಲ್ಲಿ ದೆಹಲಿಯ ಸ್ಟೇಡಿಯಂನಲ್ಲಿ ಸಾವಿರಾರು ಜನರೆದುರು ಸುಶ್ರಾವ್ಯವಾಗಿ ಹಾಡಿದ್ದರು. ಆ ಹಾಡಿಗೆ ಇಂದಿಗೆ ಸರಿಯಾಗಿ 50 ವರ್ಷ!
ಮುಂದೆ, ರಾಷ್ಟ್ರಗೀತೆಯಷ್ಟೇ ಜನಪ್ರಿಯವಾದ ಆ ಹಾಡು ಯಾವುದಪ್ಪಾ ಅಂದರೆ 'ಏ ಮೇರೆ ವತನ್ ಕೇ ಲೋಗೋಂ, ಝರಾ ಆಂಖ್ ಮೆ ಭರ್ಲೋ ಪಾನಿ...' ಈಗಲೂ ಅಷ್ಟೇ ಈ ಹಾಡು ಕಿವಿಗೆ ಬಿದ್ದಾಕ್ಷಣ ದೇಶಭಕ್ತರ ಕಣ್ಣಾಲಿಗಳು ತುಂಬಿಬರುತ್ತವೆ.
ಈ ಹಾಡು ಕೇಳಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೂ ಸಹ ಕಣ್ಣೀರಾಗಿದ್ದರು. 1962ರ ಭಾರತ-ಚೀನಾ ಯುದ್ಧದಲ್ಲಿ ಸೋಲುಂಡು ನೋವನುಭವಿಸುತ್ತಿದ್ದ ಹೃದಯಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸಿತ್ತು ಆ ಹಾಡು...
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಮಹಾಕವಿ ಪ್ರದೀಪ್ ಅವರು ಈ ಗೀತೆಯನ್ನು ರಚಿಸಿದ್ದರು. ಯುದ್ಧ ಮುಗಿದ ಕೆಲವೇ ದಿನಗಳ ಬಳಿಕ ಈ ಹಾಡು ರೂಪುಗೊಂಡಿತ್ತು. ಮುಂಬೈನ ಕಡಲ ತಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ 'ಏ ಮೇರೆ ವತನ್ ಕೆ ಲೋಗೋಂ' ಸಾಲುಗಳು ಪ್ರದೀಪ್ ಅವರಿಗೆ ಹೊಳೆದಿತ್ತಂತೆ.
ನೈಜ ದೇಶಭಕ್ತಿಯನ್ನು ಚಿಮ್ಮಿಸುವ ಈ ಹಾಡಿಗೆ ರಾಗ ಸಂಯೋಜನೆ ಮಾಡಿದ ಸಿ ರಾಮಚಂದ್ರ ಅವರಾಗಲಿ, ಸ್ವತಃ ಲತಾ ಅವರಾಗಲಿ, ಸಾಹಿತ್ಯಕಾರ ಪ್ರದೀಪ್ ಅವರಾಗಲಿ ಒಂದು ನಯಾ ಪೈಸೆಯನ್ನು ಪಡೆಯದೆ ದೇಶಭಕ್ತಿಯನ್ನು ಹೊಮ್ಮಿಸಿದ್ದರು.