ಅಗತ್ಯ ಬಿದ್ದರೆ ಬಹುಮತ ಸಾಬೀತಿಗೆ ಸೂಚನೆ: ರಾಜ್ಯಪಾಲ
ರಾಜೀನಾಮೆ ಪತ್ರ ಕೈಲಿ ಹಿಡಿದುಕೊಂಡು 13 ಶಾಸಕರು ನನ್ನನ್ನು ಭೇಟಿ ಮಾಡಿದ್ದರು. ರಾಜಕೀಯ ಪರಿಸ್ಥಿತಿ ಬಗ್ಗೆ ಸೂಚಿಸಿದ್ದರು. ಇನ್ನಷ್ಟು ಶಾಸಕರ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ, ಶೆಟ್ಟರ್ ಸರ್ಕಾರ ಬಹುಮತ ಸಾಬೀತು ಪಡಿಸಲು ಸೂಚಿಸಲು ನಿರ್ಧರಿಸಿದ್ದೇನೆ.
ಈ ಬಗ್ಗೆ ಶೆಟ್ಟರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸೂಚನೆ ನೀಡುತ್ತೇನೆ. ಫೆ.4 ರಂದು ಬಹುಮತ ಸಾಬೀತಿಗೆ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ರಾಜಭವನ ಮೂಲಗಳು ಹೇಳಿದೆ.
ಇದೇ ಸಂದರ್ಭದಲ್ಲಿ ಸ್ಪೀಕರ್ ಬೋಪಯ್ಯ ಅವರ ನಾಪತ್ತೆ ಬಗ್ಗೆ ನಾನು ಏನ್ನನ್ನೂ ಹೇಳಲಾರೆ. ಸ್ಪೀಕರ್ ಅವರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ರಾಜ್ಯಪಾಲರು ಹೇಳಿದ್ದಾರೆ.
ಶೆಟ್ಟರ್ ರಹಸ್ಯ ಚರ್ಚೆ, ಸಭೆ: ಶಾಸಕರ ರಾಜೀನಾಮೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶುಕ್ರವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಮಧ್ಯಾಹ್ನ 3 ಗಂಟೆ ನಂತರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಉಪಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ಪಕ್ಷದ ನಾಯಕರೊಂದಿಗೂ ಶೆಟ್ಟರ್ ಸಮಾಲೋಚನೆ ನಡೆಸಿದ್ದಾರೆ.
ಪ್ರಪ್ರಥಮ ಬಜೆಟ್ ಮಂಡನೆ ಕನಸು ಹೊತ್ತಿರುವ ಶೆಟ್ಟರ್ ಅವರು ರಾಜೀನಾಮೆ ಬೆದರಿಕೆಗೆ ತಕ್ಕ ಉತ್ತರ ನೀಡಲು ತಂತ್ರಗಳನ್ನು ಹುಡುಕುತ್ತಿದ್ದಾರೆ. ಒಂದು ವೇಳೆ ಬಹುಮತ ಸಾಬೀತುಪಡಿಸುವ ಪ್ರಸಂಗ ಎದುರಾದಲ್ಲಿ ಜೆಡಿಎಸ್ ನೆರವು ಕೋರುವ ಬಗ್ಗೆಯೂ ಬಿಜೆಪಿಯಲ್ಲಿ ಭಾರಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ,
ಯಡಿಯೂರಪ್ಪ ಬೆಂಬಲಿಗ ಶಾಸಕರು ಸ್ಪೀಕರ್ ಬೋಪಯ್ಯ ಅವರ ಅನುಪಸ್ಥಿತಿಯಲ್ಲಿ ಬುಧವಾರ(ಜ.23) ರಾಜಭವನಕ್ಕೆ ತೆರಳಿ ದೂರು ನೀಡಿದ ಬೆನ್ನಲ್ಲೇ ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಶೆಟ್ಟರ್ ರಾಜ್ಯಪಾಲ ಭಾರದ್ವಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಆರೆಸ್ಸೆಸ್ ಜತೆ ಈಶ್ವರಪ್ಪ ಚರ್ಚೆ: ಬಿಜೆಪಿ ಬಿಕ್ಕಟ್ಟಿಗೆ ಪರಿಹಾರ ಹುಡುಕಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖಂಡರೊಂದಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪರವಾಗಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ.
ಗುರುವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಂಘದ ಕೇಂದ್ರ ಕಚೇರಿ ಕೇಶವ ಕೃಪಾಗೆ ತೆರಳಿದ ಕೆಎಸ್ ಈಶ್ವರಪ್ಪ ಅವರು ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟದ ಬಗ್ಗೆ ಮತ್ತು ರಾಜ್ಯಾಧ್ಯಕ್ಷ ಆಯ್ಕೆ ಗೊಂದಲದ ಬಗ್ಗೆ ಚರ್ಚಿಸಿದ್ದಾರೆ.