ಮ್ಯಾನ್ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿ ಅನಂತಮೂರ್ತಿ
ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ 10 ಕಾದಂಬರಿಕಾರರಲ್ಲಿ ಭಾರತದಿಂದ ಆಯ್ಕೆಯಾಗಿರುವ ಏಕೈಕ ಕಾದಂಬರಿಕಾರ ಡಾ. ಯು.ಆರ್. ಅನಂತಮೂರ್ತಿ. ಈ ಪಟ್ಟಿಯಲ್ಲಿರುವ ಇತರರು : ಆಹರೋನ್ ಆಪಲ್ಫೀಲ್ಡ್ (ಇಸ್ರೇಲ್), ಲಿಡಿಯಾ ಡೇವಿಸ್ (ಅಮೆರಿಕ), ಇಂತಿಜಾರ್ ಹುಸೇನ್ (ಪಾಕಿಸ್ತಾನ), ಯಾನ್ ಲಿಯಾಂಕೆ (ಚೀನಾ), ಮಾರಿ ಎನ್ಡಿಯಾ (ಫ್ರಾನ್ಸ್), ಜೋಸಿಪ್ ನೋವಾಕೊವಿಚ್ (ಕೆನಡಾ), ಮರಿಲಿನ್ ರಾಬಿನ್ಸನ್ (ಅಮೆರಿಕ), ವ್ಲಾಡಿಮಿರ್ ಸೊರೊಕಿನ್ (ರಷ್ಯಾ) ಮತ್ತು ಪೀಟರ್ ಸ್ಟಾಮ್ (ಸ್ವಿಟ್ಜರ್ಲೆಂಡ್).
60 ಸಾವಿರ ಪೌಂಡ್ ಪ್ರಶಸ್ತಿ ಮೊತ್ತ ಹೊಂದಿರುವ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕಾದಂಬರಿಕಾರ ಬರೆದಿರುವ ಒಂದು ಪ್ರಶಸ್ತಿಯನ್ನು ಮಾತ್ರ ಪರಿಗಣಿಸದೆ, ಅವರ ಒಟ್ಟಾರೆ ಸಾಹಿತ್ಯಕೃಷಿಯನ್ನು ತುಲನೆಮಾಡಿ ನೋಡಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಕಾದಂಬರಿಕಾರ ಕೃತಿಗಳನ್ನು ಬರೆದಿರಬೇಕು ಅಥವಾ ಅವರು ಬರೆದಿರುವ ಕಾದಂಬರಿಗಳು ಆಂಗ್ಲ ಭಾಷೆಯಲ್ಲಿ ಅನುವಾದಿತವಾಗಿರಬೇಕು. ಅನಂತಮೂರ್ತಿಯವರ 'ಸಂಸ್ಕಾರ' ಕೃತಿ ಸೇರಿದಂತೆ ಅನೇಕ ಕಾದಂಬರಿಗಳು ಇಂಗ್ಲಿಷಿಗೆ ಭಾಷಾಂತರಗೊಂಡಿವೆ.
ಡಿ.22ರಂದು 80ನೇ ಹುಟ್ಟುಹಬ್ಬ ಆಚರಿಸಿಕೊಂಡ ಅನಂತಮೂರ್ತಿಯವರು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ 'ಸಂಸ್ಕಾರ' ಕಾದಂಬರಿ ಸೇರಿದಂತೆ 5 ಕಾದಂಬರಿಗಳನ್ನು, ಎಂಟು ಸಣ್ಣಕಥಾ ಸಂಕಲನಗಳನ್ನು, ಒಂದು ನಾಟಕವನ್ನು, ಮೂರು ಕವನ ಸಂಕಲನಗಳನ್ನು ಮತ್ತು ಎಂಟು ಪ್ರಬಂಧ ಸಂಕಲನಗಳನ್ನು ಬರೆದಿದ್ದಾರೆ. ಅವರ ಕೃತಿಗಳು ಇಂಗ್ಲಿಷ್ ಮತ್ತು ಯುರೋಪಿನ ಅನೇಕ ಭಾಷೆಗಳಲ್ಲಿ ಅನುವಾದಿತವಾಗಿವೆ. ಅವರ ಕಾದಂಬರಿ 'ಭಾರತಿಪುರ'ಕ್ಕೆ 2011ರಲ್ಲಿ ಹಿಂದೂ ಸಾಹಿತ್ಯ ಪ್ರಶಸ್ತಿ ಲಭಿಸಿತ್ತು.
ತೀರ್ಪುಗಾರರ ಪಟ್ಟಿಯಲ್ಲಿ ಒಟ್ಟು ಐವರಿದ್ದು, ಲಂಡನ್ನಿನ ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂನಲ್ಲಿ ಮೇ 22ರಂದು ಪ್ರಶಸ್ತಿ ವಿಜೇತರ ಹೆಸರನ್ನು ಬಹಿರಂಗಪಡಿಸಲಾಗುವುದು. ಜ್ಞಾನಪೀಠ, ಕನ್ನಡ ರಾಜ್ಯೋತ್ಸವ, ಮಾಸ್ತಿ, ಪದ್ಮ ಭೂಷಣ, ಕನ್ನಡ ವಿಶ್ವವಿದ್ಯಾಲಯದ ನಾಡೋಜ, ಹಿಂದೂ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿರುವ ಡಾ. ಯು.ಆರ್. ಅನಂತಮೂರ್ತಿಯವರಿಗೆ ಪ್ರತಿಷ್ಠಿತ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸುವಂತಾಗಲಿ.
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಯುಆರ್ಎ : ಧಾರವಾಡದಲ್ಲಿ ಜ.25ರಿಂದ 27ರವರೆಗೆ ನಡೆಯುತ್ತಿರುವ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಡಾ. ಯು.ಆರ್.ಅನಂತಮೂರ್ತಿ ಅವರು ಸಾಹಿತಿ ಜಿ.ಎಸ್.ಅಮೂರ ಅವರ ಜೊತೆ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಆಶಯ ಭಾಷಣ ಮಾಡಲಿದ್ದಾರೆ. ಉದ್ಘಾಟನೆ ಜ.25ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.