Sack ಶಿಂಧೆ : ಈಶ್ವರಪ್ಪ ನೇತೃತ್ವದ ಪ್ರತಿಭಟನೆಗೆ ಯಶ
ಬೆಂಗಳೂರಿನ ಮೈಸೂರು ಸರ್ಕಲ್ ಬಳಿ ಮಾತನಾಡಿದ ಡಿಸಿಎಂ ಈಶ್ವರಪ್ಪ ಅವರು, ಗೃಹ ಸಚಿವ ಶಿಂಧೆ ಅವರು ಉಗ್ರರ ಏಜೆಂಟ್ ಇರಬೇಕು ಎಂಬ ಅನುಮಾನ ಕಾಡುತ್ತದೆ. ಶಿಂಧೆ ಅವರು ಆರೆಸ್ಸೆಸ್ ಹಾಗೂ ಬಿಜೆಪಿ ಬಗ್ಗೆ ನೀಡಿರುವ ಹೇಳಿಕೆಯನ್ನು ಹಲವಾರು ಉಗ್ರ ಸಂಘಟನೆಗಳು ಸ್ವಾಗತಿಸಿರುವುದೇ ಇದಕ್ಕೆ ಸಾಕ್ಷಿ.
ಶಿಂಧೆ ಅವರ ಹೇಳಿಕೆಗೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಇಲ್ಲವಾದರೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ ಅವರು, ಶಿಂಧೆ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳದೇ ಅದನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಸುಮಾರು 65 ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಬಳ್ಳಾರಿ, ಧಾರವಾಡ, ಬೆಳಗಾವಿ, ತುಮಕೂರು, ಕಲ್ಬುರ್ಗಿ ಹಾಗೂ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಪ್ರತಿಭಟನೆ ಯಶಸ್ವಿಯಾಗಿ ಸಾಗಿದೆ.
ಮಲೆನಾಡು, ಕರಾವಳಿ ಭಾಗದ ಮಂಗಳೂರು, ಪುತ್ತೂರು, ಸುಳ್ಯ ಮುಂತಾದೆಡೆ ಕೂಡಾ ಶಿಂಧೆ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ....
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಹೇಳಿಕೆಯ ವಿರುದ್ಧ ಗುರುವಾರ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದಿರುವ ಪ್ರತಿಭಟನೆ ನೇತೃತ್ವವನ್ನು ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ವಹಿಸಿಕೊಂಡಿದ್ದಾರೆ. ಬಿಜೆಪಿ ನೂತನ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದಾರೆ.