ಶಾಸಕ ಪ್ರಿಯಕೃಷ್ಣ ಆಸ್ತಿ ಅಕ್ರಮವಲ್ಲ, ಸಕ್ರಮ
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಜಯನಗರ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕ್ಷೇತ್ರ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ಲೋಪವಿದೆ. ಅಪ್ಪ ಮಗ ಇಬ್ಬರ ಶಾಸಕತ್ವವನ್ನು ಅನರ್ಹಗೊಳಿಸುವಂತೆ ವಕೀಲರೊಬ್ಬರು ಲೋಕಾಯುಕ್ತ ಕೋರ್ಟಿಗೆ ಮನವಿ ಸಲ್ಲಿಸಿದ್ದರು.
ಆದರೆ, ಅರ್ಜಿದಾರರು ಮಾಡಿದ ಆರೋಪಗಳಿಗೂ ಸಲ್ಲಿಸಿದ ಪೂರಕ ದಾಖಲೆಗಳಿಗೂ ಹೋಲಿಕೆ ಇರಲಿಲ್ಲ ಹೀಗಾಗಿ ಆರೋಪ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. [B-report: When police have filed a B report you will have to file an objections and you will have to lead your evidence to get issue summons to the accused.-ವಕೀಲ ರಾಜೀವ್]
ಈ ನಡುವೆ ಪೊಲೀಸರ ಬಿ ರಿಪೋರ್ಟ್ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಅರ್ಜಿದಾರರ ಪ್ರಕಾಶ್ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪುರಸ್ಕರಿಸಿದ ಲೋಕಾಯುಕ್ತ ಕೋರ್ಟ್, ಮುಂದಿನ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ.
ಶಾಸಕ ಎಂ.ಕೃಷ್ಣಪ್ಪ ಮತ್ತವರ ಪತ್ನಿ ಪ್ರಿಯದರ್ಶಿನಿ, ಪುತ್ರರಾದ ಪ್ರಿಯಕೃಷ್ಣ ಹಾಗೂ ಪ್ರದೀಪ್ ವಿರುದ್ಧ ಅಪರಾಧ ದಂಡ ಪ್ರಕಿಯಾ ಸಂಹಿತೆ ಕಾಯ್ದೆ (ಸಿಆರ್ಪಿಸಿ) ಸೆಕ್ಷನ್ 156(3)ರಡಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷರಿಗೆ ನ್ಯಾ. ಸುಧೀಂದ್ರ ರಾವ್ ಅವರು ಆದೇಶಿಸಿದ್ದರು.
ಘೋಷಿಸಿರುವ ಆಸ್ತಿ ವಿವರಗಳಲ್ಲಿ ಸುಮಾರು 700 ಕೋಟಿ ರೂ. ನಷ್ಟು ವ್ಯತ್ಯಾಸವಿದೆ. ಆರೋಪಿಗಳು ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎಂದು ವಕೀಲ ಪ್ರಕಾಶ್ ಆರೋಪಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರಿಯಕೃಷ್ಣ ಅವರ ಆಸ್ತಿ ಮೊತ್ತದ ಅಂದಾಜು 700 ಕೋಟಿ ರು ಮೀರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಶಾಸಕ ಎಂ.ಕೃಷ್ಣಪ್ಪ ಅವರ ಕುಟುಂಬ ಸದಸ್ಯರಾದ ಪ್ರಿಯಾದರ್ಶಿನಿ, ಪ್ರಿಯಕೃಷ್ಣ, ಪ್ರದೀಪ್ ಹೆಸರಿನಲ್ಲಿ ಯಶವಂತಪುರ, ಗೆದ್ದಲಹಳ್ಳಿ ಹಾಗೂ ಇನ್ನಿತರ ಕಲ್ಯಾಣಮಂಟಪ, ವಾಣಿಜ್ಯ ಸಂಕೀರ್ಣ ಸೇರಿದಂತೆ ನೂರಾರು ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ.
ಮಾಗಡಿ ಬಳಿ 600 ಎಕರೆ ಭೂಮಿ ಸೇರಿದಂತೆ ನಗರದ ಸುತ್ತಮುತ್ತು ಸುಮಾರು 2000 ಎಕರೆ ಜಮೀನು ಹೊಂದಿದ್ದಾರೆ. ಈ ಅಸ್ತಿವಿವರಗಳಿಗೆ ಸರಿಯಾದ ದಾಖಲಾತಿ ಹೊಂದಿಲ್ಲ. ಶಾಸಕ ಸ್ಥಾನ ದುರ್ಬಳಕೆ ಎದ್ದು ಕಾಣುತ್ತಿದ್ದು, ತನಿಖೆ ನಡೆಸಬೇಕು ಎಂದು ವಕೀಲ ಪ್ರಕಾಶ್ ಮನವಿ ಸಲ್ಲಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ಮಾಹಿತಿಯನ್ವಯ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಸಾವಿರಾರು ಕೋಟಿ ರೂ.ಗಳ ಆಸ್ತಿ ಹೊಂದಿದ್ದಾರೆ. ಆದರೆ, ಚುನಾವಣಾ ಆಯೋಗಕ್ಕೆ ಮಾತ್ರ ಸಂಪೂರ್ಣ ಆಸ್ತಿಯ ವಿವರವನ್ನು ಸಲ್ಲಿಸಿಲ್ಲ ಎಂದು ದೂರುದಾರ ವಕೀಲ ಮುರುಳೀಧರ್ ಆರೋಪಿಸಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿದೆ.