ನಂದಿ ಆವರಣದಲ್ಲಿ ದಾಂಧಲೆ: ಮಾನಸಿಕ ಅಸ್ವಸ್ಥ ಬಂಧನ
ಮೈಸೂರು, ಜ.24: ಅರಮನೆಗಳ ನಗರಿ ಮೈಸೂರಿನ ಹೊರವಲಯದಲ್ಲಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರಶಾಂತವಾಗಿ ನೆಲೆಯೂರಿದ್ದ ನಂದಿ ವಿಗ್ರಹದ ವಾತಾವರಣಕ್ಕೆ ದುಷ್ಕರ್ಮಿಗಳು ನಿನ್ನೆ ಬುಧವಾರ ರಾತ್ರಿ ಭಂಗ ತಂದಿದ್ದಾರೆ.
ಬೆಟ್ಟದ ಮಧ್ಯದಲ್ಲಿರುವ ನಂದಿ ವಿಗ್ರಹದ ಸುತ್ತಮುತ್ತ ಇದ್ದ ವಿಗ್ರಹಗಳನ್ನು ಕಿರಾತಕರು ಧ್ವಂಸಗೊಳಿಸಿದ್ದಾರೆ.
ಆದರೆ ದೊಡ್ಡ ನಂದಿ ವಿಗ್ರಹಕ್ಕೆ ಯಾವುದೇ ಧಕ್ಕೆಯಾಗಿಲ್ಲ. ದುರುದ್ದೇಶಪೂರ್ವಕವಾಗಿ ಸಮಾಜಘಾತುಕ ಶಕ್ತಿಗಳು ಈ ಕುಕೃತ್ಯ ನಡೆಸಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯ ನಂದಿ ವಿಗ್ರಹದ ಮೇಲಿದ್ದ ರುದ್ರಾಕ್ಷಿ ಮಾಲೆಯನ್ನು ಕಿತ್ತೆಸೆಯಲಾಗಿದೆ. ಬಟ್ಟೆಯನ್ನು ಸುಟ್ಟುಹಾಕಲಾಗಿದೆ.
ದೊಡ್ಡ ದೇವರಾಜ ಆಡಳಿತ ಕಾಲದಲ್ಲಿ ಈ ಬೃಹತ್, ಕರಿದಾದ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. 15 ಅಡಿ ಎತ್ತರ, 24 ಅಡಿ ಅಗಲದ ಈಶ್ವರನ ವಾಹನ ನಂದಿಯನ್ನು 1659ರಲ್ಲಿ ಕೆತ್ತಲಾಗಿದೆ.
ತಾಜಾ ಸುದ್ದಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಪೊಲೀಸ್ ಅಧಿಕಾರಿ ಸುಧೀಂದ್ರ ಅವರು 'ನಂದಿ ಆವರಣದಲ್ಲಿ ನಿನ್ನೆ ರಾತ್ರಿ ದಾಂಧಲೆ ನಡೆದಿರುವ ಕುಕೃತ್ಯದ ಹಿಂದೆ ಮಾನಸಿಕ ಅಸ್ವಸ್ಥನ ಕೈವಾಡವಿರಬಹುದು' ಎಂದು ಶಂಕೆ ವ್ಯಕ್ತಪಡಿಸಿದ್ದರು. ಅದೀಗ ನಿಜವಾಗಿದ್ದು, ಮೈಸೂರು ಪೊಲೀಸರು ಮಾನಸಿಕ ಅಸ್ವಸ್ಥನೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಮಧ್ಯೆ, ಚಾಮುಂಡಿ ಬೆಟ್ಟಕ್ಕೆ ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆ ವರೆಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಅವರು ತಿಳಿಸಿದ್ದಾರೆ.