ಶೋಭಾ ಕರಂದ್ಲಾಜೆ, ಉದಾಸಿ ರಾಜೀನಾಮೆ
ಇಬ್ಬರೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿ ಸಚಿವ ಸ್ಥಾನಕ್ಕೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಕೊಪ್ಪಳ ಪ್ರವಾಸಕ್ಕೆ ತೆರಳುವ ತರಾತುರಿಯಲ್ಲಿದ್ದ ಸಿಎಂ ಶೆಟ್ಟರ್ ಅವರು ಶೋಭಾ ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿದ್ದಾರೆ. ಆದರೆ ಪಕ್ಷದ ಮುಖಂಡರ ಜತೆ ಚರ್ಚಿಸಿದ ಬಳಿಕವಷ್ಟೇ ಇಬ್ಬರು ಸಚಿವರ ರಾಜೀನಾಮೆ ಅಂಗೀಕಾರದ ಬಗ್ಗೆ ಅವರು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಕೆಜೆಪಿ ಕಾರ್ಯತಂತ್ರವಾಗಿ ಲೋಕೋಪಯೋಗಿ ಸಚಿವ ಉದಾಸಿ ನಿವಾಸದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಉಪಹಾರ ಏರ್ಪಡಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ಹಾಜರಾದ ಯಡಿಯೂರಪ್ಪ ಅವರನ್ನು ಶೋಭಾ ಮತ್ತು ಉದಾಸಿ ಸ್ವಾಗತಿಸಿದರು.
ಆಗ ಯಡಿಯೂರಪ್ಪ ಅವರು 'ತಕ್ಷಣ ಮುಖ್ಯಮಂತ್ರಿ ಮನೆಗೆ ತೆರಳಿ ರಾಜೀನಾಮೆ ಸಲ್ಲಿಸಿ ಬನ್ನಿ. ಆಮೇಲೆ ಟಿಫಿನ್ ಮಾಡುವಿರಂತೆ ಎಂದು ಶೋಭಾ ಮತ್ತು ಉದಾಸಿಗೆ ಆಜ್ಞಾಪಿಸಿದರು' ಎನ್ನಲಾಗಿದೆ. ಅದರಂತೆ ಇಬ್ಬರೂ ಖಾಸಗಿ ಕಾರಿನಲ್ಲಿ ಸಿಎಂ ಮನೆಗೆ ತೆರಳಿ ರಾಜೀನಾಮೆ ಸಲ್ಲಿಸಿ ಬಂದಿದ್ದಾರೆ.
ಶಾಸಕ ನೆಹರು ಓಲೇಕಾರ್ ಸಹ ಇಬ್ಬರೂ ಸಚಿವರಿಗೆ ಸಾಥ್ ನೀಡಿದರಾದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿರುವುದು ಸ್ಪೀಕರ್ ಅವರಿಗೆ. ಹಾಗಾಗಿ ಖಾಲಿ ಕೈಯಲ್ಲಿ ಬಂದಿದ್ದಾರೆ.
ಗಮನಾರ್ಹವೆಂದರೆ ಇನ್ನಿಬ್ಬರು ಸಚಿವರಾದ ನಿರಾಣಿ ಮತ್ತು ರೇಣುಕಾಚಾರ್ಯ ಅವರು ಬೆಂಗಳೂರಿನತ್ತ ಸುಳಿದಿಲ್ಲ. '12 ಶಾಸಕರು ಇಂದು ಮಧ್ಯಾಹ್ನ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರಗಳನ್ನು ನೀಡುತ್ತಾರೆ' ಎಂದು ಉದಾಸಿ ಸ್ಪಷ್ಟಪಡಿಸಿದ್ದಾರೆ.